LATEST NEWS
ಕಳ್ಳನಿಗೆ ಚಳ್ಳೆಹಣ್ಣು ತಿನ್ನಿಸಿತೇ ದೈವ…….!
ಕಳ್ಳನಿಗೆ ಚಳ್ಳೆಹಣ್ಣು ತಿನ್ನಿಸಿತೇ ದೈವ…….!
ಉಪ್ಪಿನಂಗಡಿ ಫೆಬ್ರವರಿ 26: ಒಂದೇ ಮನೆಗೆ ಎರಡು ಬಾರಿ ಕಳ್ಳತನ ಮಾಡಲು ಬಂದ ಕಳ್ಳರು ಅನಾಯಾಸವಾಗಿ ಸಿಕ್ಕಿ ಬಿದ್ದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಮನೆಯ ದೈವದ ಕಾರ್ಣಿಕದಿಂದಾಗಿ ಕಳ್ಳರಿಗೆ ಕಳ್ಳತನ ಮಾಡಲು ಸಾಧ್ಯವಾಗದೇ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಎರಡು ಕಳ್ಳತನ ಪ್ರಕರಣಗಳು ದರ್ಶನ್ ಎಂಟರ್ಪ್ರೈಸಸ್ ಮಾಲೀಕ ಸುದರ್ಶನ್ ಅವರ ಮನೆಯಲ್ಲೇ ನಡೆದಿದೆ. ಒಂದು ಪ್ರಕರಣದಲ್ಲಿ ಕಳ್ಳ ಮಾಳಿಗೆ ಮನೆಯ ಛಾವಣಿಯನ್ನೇರಿದ್ದ ಕಳ್ಳ ಹೆಂಚುಗಳನ್ನು ತೆಗೆದು ಮನೆಯ ಕೀ ಗೊಂಚಲನ್ನು ತೆಗೆದುಕೊಂಡಿದ್ದ ಆದರೆ ಮನೆಯ ಯಾವುದೇ ವಸ್ತುಗಳನ್ನು ಕಳ್ಳತನ ಮಾಡದೇ ನಡುಕೋಣೆಯಲ್ಲಿದ್ದ ದಿವಾನದಲ್ಲಿ ಗಡದ್ದಾಗಿ ನಿದ್ರೆ ಮಾಡಿದ್ದಾನೆ.
ಸುದರ್ಶನ್ ಮುಂಜಾನೆ ಎದ್ದಾಗ ನಡು ಕೋಣೆಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ನಿದ್ರಿಸುತ್ತಿರುವುದನ್ನು ಕಂಡು ದಿಗಿಲುಗೊಂಡಿದ್ದರು. ಎಲ್ಲ ಬಾಗಿಲುಗಳನ್ನು ಭದ್ರಪಡಿಸಿದ್ದರೂ ವ್ಯಕ್ತಿ ಒಳಗೆ ಹೇಗೆ ಪ್ರವೇಶಿಸಿದ ಎಂದು ಪರಿಶೀಲಿಸಿದಾಗ ಮಹಡಿ ಮೇಲಿನ ಛಾವಣಿಯ ಹೆಂಚು ತೆಗೆದಿರುವುದು ಕಂಡುಬಂತು. ಬಂದಾತ ಕಳ್ಳನೆಂದು ದೃಢಪಟ್ಟ ಬಳಿಕ ಆತನಿಗೆ ಎರಡೇಟು ನೀಡಿ ನಿದ್ರೆಯಿಂದ ಎಬ್ಬಿಸಿದಾಗ ಮನೆಯ ಬೀಗದ ಕೀ ಗಳು ಪತ್ತೆಯಾದವು.
ಇದೇ ರೀತಿ 2 ದಿನದ ಹಿಂದೆ ಮತ್ತೊಬ್ಬ ಕಳ್ಳ ಕೂಡ ಇವರ ಮನೆ ಸಮೀಪ ಇರುವ ದೈವದ ಗುಡಿಯೊಳಗೆ ಕಳ್ಳ ನುಗ್ಗಿದ್ದು, ಕದ್ದ ಹಣದೊಂದಿಗೆ ಪರಾರಿಯಾಗಲು ಆಗದೆ ಅಲ್ಲೇ ಸುತ್ತುತ್ತಿದ್ದ. ಬಳಿಕ ಆತನನ್ನು ಪೊಲೀಸರ ಕೈಗೆ ನೀಡಲಾಗಿತ್ತು.
ಮನೆಯ ಯಜಮಾನ ಉದ್ಯಮಿ ಸುದರ್ಶನ ಅವರು ಅಪಾರ ದೈವ ಭಕ್ತರಾಗಿದ್ದು, ಮನೆತನದಲ್ಲಿ ಕಾರಣಿಕ ದೈವದ ಆರಾಧನೆ ನಿಯಮಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮಹಡಿ ಛಾವಣಿಯಿಂದ ಕೆಳಗಿಳಿದ ಕಳ್ಳನಿಗೆ ನಡು ಕೋಣೆಯಿಂದ ಮನೆಯ ಹೊರಗಡೆ ಹೋಗಲು ಬಾಗಿಲಿಗೆ ಹಾಕಲಾದ ಚಿಲಕವೊಂದನ್ನು ಸರಿಸಿದರೆ ಸಾಕಿತ್ತು. ಆದರೂ ಮನೆಯ ಬೀಗದ ಕೀಯೊಂದಿಗೆ ಆತ ನಿದ್ರೆಗೆ ಜಾರಿರುವುದು ಅಚ್ಚರಿ ಮೂಡಿಸಿದೆ.
ಈ ಎರಡು ಪ್ರಕರಣಗಳಲ್ಲಿ ಕಳ್ಳರಿಗೆ ಪರಾರಿಯಾಗಲು ಅವಕಾಶಗಳಿದ್ದರೂ ಪರಾರಿಯಾಗದೇ ಕಳ್ಳತನ ಮಾಡಿದ ಸ್ಥಳದಲ್ಲೇ ಇದ್ದಿದ್ದು, ವಿಪರ್ಯಾಸವಾಗಿದ್ದು, ದೈವ ಭಕ್ತರಾಗಿದ್ದ ಸುದರ್ಶನ್ ಅವರ ಮನೆಯಲ್ಲಿ ಕಳ್ಳತನವಾಗದಂತೆ ದೈವವೇ ತಡೆದಿದೆ.
You must be logged in to post a comment Login