DAKSHINA KANNADA
ಸುಬ್ರಹ್ಮಣ್ಯ ಪಂಚಾಯಿತಿ ಸೀಲ್ ಡೌನ್ ಆದರೂ..ಕುಕ್ಕೆಗೆ ಆಗಮಿಸುತ್ತಿರುವ ಭಕ್ತರು
ಮಂಗಳೂರು ಜೂನ್ 16:ರಾಜ್ಯದಲ್ಲಿ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಈಗ ಲಾಕ್ ಡೌನ್ ನಲ್ಲಿರುವ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ತಲೆ ನೋವು ತಂದಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವ ಹಿನ್ನಲೆ ಜೂನ್ 21 ರವೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳನ್ನು ಸೀಲ್ ಡೌನ್ ಮಾಡಲಾಗಿದೆ. ನಾಡಿನ ನಂಬರ್ ವನ್ ಮುಜರಾಯಿ ದೇಗುಲವಾದ ಕುಕ್ಕೆ ಸುಬ್ರಹ್ಮಣ್ಯ ವ್ಯಾಪ್ತಿ ಇರುವ ಸುಬ್ರಹ್ಮಣ್ಯ ಪಂಚಾಯಿತಿ ಕೂಡಾ ಸೀಲ್ ಡೌನ್ ಆಗಿದ್ದು, ಇದರ ನಡುವೆಯೇ ರಾಜ್ಯದ ಕೆಲ ಜಿಲ್ಲೆಗಳಿಂದ ಭಕ್ತರು ಸುಬ್ರಹ್ಮಣ್ಯಕ್ಕೆ ಬರುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಏಪ್ರಿಲ್ 28ರಿಂದ ಕುಕ್ಕೆ ದೇವಳಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲಾಡಳಿತವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ.ಆದರೆ ರಾಜ್ಯದ 19 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಯಾದ ಕಾರಣ ಹೊರಗಿನ ಜಿಲ್ಲೆಯ ಪ್ರವಾಸಿಗರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದು. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ಲಾಕ್ ಡೌನ್ ಸಡಿಲಿಕೆ ಮಾಡಿರುವ ಕಾರಣ ಭಕ್ತಾಧಿಗಳ ತಂಡ ಇದೀಗ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಆಗಮಿಸುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಪೋಲೀಸರು ಚೆಕ್ ಪೋಸ್ಟ್ ಅಳವಡಿಸಿದ್ದು, ಭಕ್ತಾಧಿಗಳು ಒಳ ಮಾರ್ಗದ ಮೂಲಕವೂ ದೇವಸ್ಥಾನದ ರಥಬೀದಿಗೆ ಆಗಮಿಸುತ್ತಿದ್ದು, ಇವರನ್ನು ನಿಯಂತ್ರಿಸುವುದೇ ಕಷ್ಟಸಾಧ್ಯವಾಗುತ್ತಿದೆ.
ಸುಬ್ರಹ್ಮಣ್ಯ ಪರಿಸರದಲ್ಲಿ ಭಕ್ತಾಧಿಗಳನ್ನು ತಡೆಹಿಡಿಯುವ ಬದಲು, ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಇಚ್ಲಂಪಾಡಿ, ಗುಂಡ್ಯಾ ಹಾಗೂ ಕಡಬ ಮೂಲಕ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ನಡೆಸಬೇಕಿದೆ. ಈ ಮೂಲಕ ಸೀಲ್ ಡೌನ್ ಬಗ್ಗೆ ಮಾಹಿತಿ ಇಲ್ಲದ ಭಕ್ತಾಧಿಗಳಿಗೆ ಅಲ್ಲಿಯೇ ಮಾಹಿತಿ ನೀಡುವ ಕೆಲಸವೂ ನಡೆಯಬೇಕಿದೆ. ಈ ಮೂಲಕ ಸುಬ್ರಹ್ಮಣ್ಯದ ಪೊಲೀಸ್ ಹಾಗೂ ಗ್ರಾಮಪಂಚಾಯತ್ ಸಿಬ್ಬಂದಿಗಳ ಮೇಲಿನ ಒತ್ತಡವನ್ನೂ ಕಡಿಮೆ ಮಾಡಬೇಕಿದೆ ಎಂದು ಜನ ಹೇಳುತ್ತಿದ್ದಾರೆ.
You must be logged in to post a comment Login