DAKSHINA KANNADA
ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ,ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಪ್ರಮುಖ ನದಿಗಳು…
ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ,ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಪ್ರಮುಖ ನದಿಗಳು…
ಮಂಗಳೂರು, ಅಗಸ್ಟ್ 09: ಕರಾವಳಿಯಾದ್ಯಂತ ಮಳೆ ಇಂದೂ ಮುಂದುವರಿದಿದೆ. ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ನದಿಯಲ್ಲಿ ನೀರನ ಹರಿವು ಹೆಚ್ಚಾಗಿದೆ.
ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಾನವಾಗ ಉಪ್ಪಿನಂಗಡಿ ಯಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಉಪ್ಪಿನಂಗಡಿ ನೇತ್ರಾವತಿ ನದಿಯ ನೀರಿನ ಮಟ್ಟ 30 ಮೀಟರ್ ಆಗಿದ್ದು, ಇದೀಗ 30 ಮೀಟರ್ ಗಿಂತಲೂ ಹೆಚ್ಚಿನ ಎತ್ತರದಲ್ಲಿ ನೀರು ಹರಿಯುತ್ತಿದೆ.
ನೀರಿನ ಹೆಚ್ಚಳದಿಂದಾಗಿ ಉಪ್ಪಿನಂಗಡಿ, ನಟ್ಟಿಬೈಲು ಮೊದಲಾದ ಪ್ರದೇಶಗಳ ಕೃಷಿಭೂಮಿಗೂ ಪ್ರವಾಹದ ನೀರು ಹರಿಯಲಾರಂಭಿಸಿದೆ.
ಬಂಟ್ವಾಳದಲ್ಲೂ ನೇತ್ರಾವತಿ ನದಿ ತನ್ನ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಈ ಭಾಗದಲ್ಲಿ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಇದೀಗ ನದಿ 9 ಮೀಟರ್ ಗೂ ಹೆಚ್ಚಿನ ಎತ್ತರದಲ್ಲಿ ಹರಿಯುತ್ತಿದೆ.
ಇದರಿಂದಾಗಿ ಪಾಣೆಮಂಗಳೂರು, ಗೂಡಿನ ಬಳಿ ಮೊದಲಾದ ಕಡೆಗಳಲ್ಲಿ ನೀರು ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ.
ಕುಮಾರಧಾರಾ ನದಿಯಲ್ಲಿ ನೀರಿನ ಹರಿವಿನಲ್ಲಿ ಕೊಂಚ ಇಳಿಮುಖವಾಗಿದ್ದರೂ, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸತತ ಆರನೇ ದಿನವೂ ಮುಳುಗಡೆಯಾಗಿದೆ.
ಸುಬ್ರಹ್ಮಣ್ಯ ಪರಿಸರದಲ್ಲಿ ಇದೀಗ ಮಳೆ ಪ್ರಮಾಣ ಕೊಂಚ ಕಡಿಮೆಯಾದ ಹಿನ್ನಲೆಯಲ್ಲಿ ನದಿ ನೀರಿನ ಮಟ್ಟ ಕ್ಷೀಣಿಸಿದೆ.
ಚಾರ್ಮಾಡಿ ಘಾಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿ ಸುರಿಯುತ್ತಿರುವ ಹಿನ್ನಲೆಯಲ್ಲಿ ಚಾರ್ಮಾಡಿಯ ಮೃತ್ಯುಂಜಯ ಹೊಳೆ ರಭಸದಿಂದ ಹರಿಯಲಾರಂಭಿಸಿದೆ.
ಕೊಳಂಬೆ, ಚಾರ್ಮಾಡಿ ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿವೆ. ಕೊಳಂಬೆ ಪ್ರದೇಶದಲ್ಲಿ ಸುಮಾರು 15 ಕ್ಕೂ ಮಿಕ್ಕಿದ ಮನೆಗಳು ಜಲಾವೃತಗೊಂಡಿದೆ.
ಕಳೆದ ಬಾರಿ ರೌದ್ರ ನರ್ತನ ತೋರಿದ್ಧ ಮೃತ್ಯುಂಜಯ ಹೊಳೆ ಈ ಬಾರಿಯೂ ಪ್ರವಾಹದ ರೀತಿಯಲ್ಲಿ ಹರಿಯುತ್ತಿದೆ. ಹೊಳೆಯ ತೀರದಲ್ಲಿ ನೂತನವಾಗಿ ಕಟ್ಟಿದ್ದ ತಡೆಗೋಡೆಯನ್ನೂ ಪ್ರವಾಹದ ನೀರು ಕೊಚ್ಚಿಕೊಂಡು ಹೋಗಿವೆ.
You must be logged in to post a comment Login