Connect with us

    FILM

    ಎಂ ಅರ್ ಚಿತ್ರ ಕೈ ಬಿಡಿ ಎಂದ ಪದ್ಮನಾಭ್…!?

    ಬೆಂಗಳೂರು, ಡಿಸೆಂಬರ್ 21 : ಭೂಗತ ಲೋಕದ ದೊರೆ ಎಂದೇ ಖ್ಯಾತರಾದ  ಮುತ್ತಪ್ಪ ರೈ ಅವರ ಜೀವನವನ್ನಾಧರಿಸಿ ರವಿ ಶ್ರೀವತ್ಸ, ‘ಎಂಆರ್’ ಎಂಬ ಚಿತ್ರವನ್ನು ಇತ್ತೀಚೆಗಷ್ಟೇ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುತ್ತಪ್ಪ ರೈ ಯವರ ಹುಟ್ಟೂರಾದ ಪುತ್ತೂರಿಗೂ ಭೇಟಿ ನೀಡಿ ಮಹಾಲಿಂಗೇಶ್ವರ ದೇವರ ದರ್ಶನ ಕೂಡ ಪಡೆದಿದ್ದರು.

    ಈ ಮಧ್ಯೆ, ಮುತ್ತಪ್ಪ ರೈ ಕುರಿತ ಚಿತ್ರವನ್ನು ತಾವೇ ಮಾಡುವುದಾಗಿ ‘ಕಾಲೇಜ್ ಕುಮಾರ್ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಪದ್ಮನಾಭ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಎಂಆರ್’ ಚಿತ್ರವನ್ನು ಕೈಬಿಡುವಂತೆ ರವಿ ಶ್ರೀವತ್ಸ ಮತ್ತು ನಿರ್ಮಾಪಕ ರಾಜಣ್ಣ ಅವರಿಗೂ ಸೂಚಿಸಿದ್ದಾರೆ.

    ಈ ಕುರಿತು ಮಾತನಾಡಿದ ಪದ್ಮನಾಭ್ ಅವರು, ‘ನಾನು ಎಂಆರ್ ಪಿಕ್ಚರ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದೇ ಮುತ್ತಪ್ಪ ರೈ ಅವರ ಬಯೋಪಿಕ್ ನಿರ್ಮಿಸುವುದಕ್ಕೆ. ಆ ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ನಿರ್ಮಿಸುವ ಆಸೆ ಇದೆ. ಆದರೆ, ಕಾರಣಾಂತರಗಳಿಂದ ಚಿತ್ರ ಮಾಡಲಾಗಲಿಲ್ಲ. ಈ ಮಧ್ಯೆ, ರವಿ ಶ್ರೀವತ್ಸ ಅವರು ಮುತ್ತಪ್ಪ ರೈ ಕುರಿತ ಸಿನಿಮಾದ ಮುಹೂರ್ತ ಮಾಡಿದ್ದಾರೆ. ನಾನು ದೇಶದಲ್ಲಿರಲಿಲ್ಲ. ಹಾಗಾಗಿ ಅವರು ಸಿನಿಮಾ ಮಾಡುತ್ತಿರುವುದು ಗೊತ್ತಾಗಲಿಲ್ಲ ಎಂದಿದ್ದಾರೆ.

    ಇದೀಗ ನಾನು ವಾಪಸ್ಸು ಬಂದಿದ್ದು, ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಕರೆಸಿ ಮಾತನಾಡಿದ್ದೇನೆ. ಸಿನಿಮಾ ಕೈಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ. ಸ್ವಲ್ಪ ಕಾಲಾವಕಾಶ ಕೇಳಿದ್ದಾರೆ’ ಎನ್ನುತ್ತಾರೆ ಪದ್ಮನಾಭ್, ಈ ಕುರಿತು ಎಂಆರ್‌ ನಿರ್ದೇಶಕ ರವಿ ಶ್ರೀವತ್ಸರನ್ನು ಕೇಳಿದರೆ, ತಮಗೇನೂ ಗೊತ್ತಿಲ್ಲ ಎನ್ನುತ್ತಾರೆ. ಲೊಕೇಶನ್ ನೋಡುವುದಕ್ಕೆ ಸದ್ಯದಲ್ಲೇ ಮುಂಬೈಗೆ ಹೋಗುವುದಾಗಿ ಹೇಳುತ್ತಾರೆ.

    ಕೆಲ ವರ್ಷಗಳ ಹಿಂದೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ರವರು ” ರೈ” ಎನ್ನುವ ಚಿತ್ರ ಆರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಮುತ್ತಪ್ಪ ರೈ ಯವರ ಜೀವನಾಧಾರಿತ ಚಿತ್ರ ಯಾರ ಕೈ ಸೇರುತ್ತದೆ ಕಾದು ನೋಡಬೇಕಾಗಿದೆ .

    Share Information
    Advertisement
    Click to comment

    You must be logged in to post a comment Login

    Leave a Reply