KARNATAKA
ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಶ್ರೀ ಕೆಂಡ..!
ವಿಜಯಪುರ : ರಾಜ್ಯದಲ್ಲಿ ಗೋದ್ರಾ ಮಾದರಿ ಹತ್ಯಾಕಾಂಡ ನಡೆಯುವ ಸಾಧ್ಯತೆಗಳಿವೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆಗೆ ಪೇಜಾವರ ಶ್ರೀಗಳು ಕೆಂಡವಾಗಿದ್ದಾರೆ.
ಯಾರು ಹೇಳಿಕೆಗಳ ಮೂಲಕ ಭಯೋತ್ಪಾದನೆ ಮಾಡಬಾರದು. ಹೇಳಿಕೆಗಳಿಂದ ಭಯ ಹುಟ್ಟಿಸುವವರು ಭಯೋತ್ಪಾದಕರು ಪೇಜಾವರ ಶ್ರೀಗಳು ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ ಯಾಕೆ ನೇರವಾಗಿ ಇಲಾಖೆಗಳಿಗೆ ಹೋಗಿ ಮಾಹಿತಿ ನೀಡುತ್ತಿಲ್ಲ? ಇವರು ಯಾರನ್ನು ರಕ್ಷಣೆ ಮಾಡುತ್ತಿದ್ದಾರೆ? ಕೇಳಿದ್ರೆ ಹೇಳುತ್ತೇವೆ ಎನ್ನುವುದು ವಿಧ್ವಂಸಕ ಕೃತ್ಯ ನಡೆಯಲಿ ಎಂದಂತೆ ಅಲ್ಲವೇ? ಇವರು ವಿಧ್ವಂಸಕ ಕೃತ್ಯ ನಡೆಸುವವರನ್ನ ರಕ್ಷಣೆ ಮಾಡ್ತಿದ್ದಾರಾ ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಬಿ.ಕೆ.ಹರಿಪ್ರಸಾದ್ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು. ಈಗ ಭಯ ಹುಟ್ಟಿದೆ, ಈಗ ಭಯೋತ್ಪಾದಕರು ಯಾರು? ಯಾರು ಹೇಳ್ತಿದ್ದಾರೋ ಅವರು ಸ್ವತಃ ಭಯೋತ್ಪಾದಕರು ಎಂದು ಆಕ್ರೋಶ ಹೊರಹಾಕಿದ್ದಾರೆ. ರಾಮ ಭಕ್ತರನ್ನ ಹೆದರಿಸುವ ನೆಪದಲ್ಲಿ ಇಡೀ ದೇಶವನ್ನು ಹೆದರಿಸುತ್ತಿದ್ದಾರೆ. ಕೃತ್ಯ ನಡೆದರೆ ರಾಮಭಕ್ತರ ಮೇಲಷ್ಟೇ ಅಲ್ಲ, ಎಲ್ಲರ ಮೇಲೂ ಪರಿಣಾಮ ಬೀರಲಿದೆ. ತಮಗೆ ಮಾಹಿತಿ ಇದ್ದರೆ ಅದನ್ನು ಬಹಿರಂಗಪಡಿಸಬೇಕು. ಸಂಬಂಧಪಟ್ಟವರಿಗೆ ಹೋಗಿ ಮಾಹಿತಿ ಕೊಡಬೇಕು. ಅದನ್ನು ಬಿಟ್ಟು ಹೀಗೆ ಆಗಲಿದೆ ಎಂದು ಭಯ ಹುಟ್ಟಿಸುವುದಲ್ಲ. ಇವರು ಯಾರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ? ರಾಮಭಕ್ತರಿಗೋ, ದುಷ್ಕರ್ಮಿಗಳಿಗೋ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಹುಬ್ಬಳ್ಳಿ ಕರಸೇವಕನ ಬಂಧನ ಪ್ರಕರಣದ ವಿಚಾರವಾಗಿ, ತಪ್ಪು ಮಾಡಿದ್ರೆ ತಪ್ಪಿತಸ್ಥರಿದ್ದರೆ ಶಿಕ್ಷೆ ಕೊಡುವುದು ಸರಿ. ಇಂತಹ ಸಮಯ ಸಂದರ್ಭದಲ್ಲಿ ಈ ಘಟನೆ ನಡೆಯುತ್ತಿರುವಂತಹದು ಸರಿಯಲ್ಲ. ಇದು ತಪ್ಪು ಸಂದೇಶ ಕೊಡುತ್ತಿದೆ. ಹಾಗಾಗಿ ಈ ಬಗ್ಗೆ ಸರ್ಕಾರ ಜಾಗೃತವಾಗಿರಬೇಕು ಎಂದು ಸಲಹೆ ನೀಡಿದ್ದಾರೆ.
You must be logged in to post a comment Login