ಪುತ್ತೂರು : ಅಯೋಧ್ಯೆ ಶ್ರೀ ರಾಮನ ಜನ್ಮ ಭೂಮಿಯಾಗಿದ್ದು ಅದನ್ನು ಹಿಂದೂಗಳು ಪರಾಕ್ರಮ,ಪೌರುಷದಿಂದ ಪಡೆದಿದ್ದಾರೆ . ಅದು ಸುಮ್ಮನೆ ದಾನ ಪಡೆದಿರುವುದಲ್ಲ, ಭಿಕ್ಷೆ ಬೇಡಿ ಪಡೆದಿರುವುದು ಅಲ್ಲ, ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ಕೊಡದೆ ನ್ಯಾಯಾಲಯದ ಮುಂದೆ ಬೇರೆ ವಿಧಿ ಇರಲಿಲ್ಲ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ರಾಮಜನ್ಮಭೂಮಿ ಅಯೋಧ್ಯೆ ಹಿಂದೂಗಳ ಹಕ್ಕಾಗಿತ್ತು ಮತ್ತು ಅಯೋಧ್ಯೆಕ್ಕೋಸ್ಕರ ಹಿಂದೂ ಸಮಾಜ ಎಲ್ಲಾ ರೀತಿಯ ಹೋರಾಟಗಳನ್ನು ಮಾಡಿ ಅದನ್ನು ಪಡೆಯುವ ರೀತಿಯಲ್ಲೇ ಪಡೆಯಲಾಗಿದೆ. ಸುಮ್ಮನೆ ದಾನ ಪಡೆದಿರುವುದಲ್ಲ, ಭಿಕ್ಷೆ ಬೇಡಿ ಪಡೆದಿರುವುದಲ್ಲ ಎಂದು ಹೇಳಿದರು.ರಾಮಜನ್ಮಭೂಮಿಯನ್ನು ಹಿಂದೂಗಳಿಗೆ ಕೊಡದೆ ನ್ಯಾಯಾಲಯದ ಮುಂದೆ ಬೇರೆ ವಿಧಿ ಇರಲಿಲ್ಲ ಆದ್ದರಿಂದ ಐವರು ಸದಸ್ಯರ ನ್ಯಾಯಪೀಠ ಅಯೋಧ್ಯೆ ಹಿಂದೂಗಳಿಗೆ ಸೇರಿದ್ದ ಎನ್ನುವ ಮಹತ್ವದ ತೀರ್ಪು ನೀಡಿದೆ. ರಾಮಜನ್ಮಭೂಮಿಯ 60 ಎಕರೆ ಜಾಗವೂ ಹಿಂದೂಗಳಿಗೆ ನೀಡಿದೆ.ಈ ರೀತಿಯ ತೀರ್ಪು ಬರಲು ಹಿಂದೂಗಳ ಪರಾಕ್ರಮ, ಪೌರುಷವೇ ಕಾರಣ ಎಂದು ಅಭಿಪ್ರಾಯಪಟ್ಟರು. 1992 ಡಿಸೆಂಬರ್ 6 ರ ಘಟನೆ ಇತಿಹಾಸದಲ್ಲಿ ಸುವರ್ಣಾಕ್ಷರಲ್ಲಿ ಬರೆಯಬೇಕಾದ ದಿನ, 464 ವರ್ಷಗಳ ಹೋರಾಟ, ಲಕ್ಷಾಂತರ ಬಲಿದಾನಗಳ ಬಳಿಕ ಪಡೆದ ಜಯ ಇದಾಗಿದೆ.ಇಡೀ ಹಿಂದೂ ಸಮಾಜ ಜಾತಿ,ಶ್ರೀಮಂತ, ಬಡವ,ಮೇಲು-ಕೀಳು ಎನ್ನುವುದನ್ನು ಬಿಟ್ಟು ಒಂದಾದ ದಿನ ಇದಾಗಿದೆ. ನಾನು ಎರಡು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದೇನೆ. ಅಲ್ಲಿ ಇದ್ದದ್ದು ಬಾಬರಿ ಮಸೀದಿಯಲ್ಲ, ಅದು ಬಾಬರ ಕಟ್ಟಿದ ಒಂದು ಕಟ್ಟಡ ಮಾತ್ರ. ಮಸೀದಿಯಾಗುತ್ತಿದ್ದರೆ ಅಲ್ಲಿ ಮೀನಾರು ಇರಬೇಕಿತ್ತು, ಕೈ ತೊಳೆಯುವ ತೊಟ್ಟಿ ಇರಬೇಕಿತ್ತು, ಬಾಂಗ್ ಮಾಡುವ ಕೊಠಡಿಯೂ ಇಲ್ಲ. ಕೇವಲ ಒಂದು ಕಟ್ಟಡವನ್ನು ಬಾಬರ ಕಟ್ಟಿ ನಂತರ ಅದನ್ನು ಹಾಗೆ ಬಿಟ್ಟಿದ್ದಾನೆ,ಆ ಕಟ್ಟಡವನ್ನು ಹಿಂದೂಗಳು ದ್ವಂಸ ಮಾಡಿದ್ದಾರೆ ಎಂದು ಡಾ, ಕಲ್ಲಡ್ಕ ಪ್ರಭಾಕರ್ ಭಟ್ ನುಡಿದರು.



