ಕಡಬ : ಗ್ರಾಹಕರ ಸೋಗಿನಲ್ಲಿ ಗೂಡಂಗಡಿಗೆ ಬಂದ ಅಪರಿಚಿತ ವ್ಯಕ್ತಿ ಅಂಗಡಿಯೊಳಗಿದ್ದ ಮಹಿಳೆಯ ಕೊರಳಿನಿಂದ ಚಿನ್ನದ ಸರ ಎಳೆದು ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದಿದೆ.

ಕೊಳ್ತಿಗೆ ಗ್ರಾಮದ ಪಾಂಬಾರು ಎಂಬಲ್ಲಿ ಈ ಘಟನೆ ನಡೆದಿದ್ದು ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಜಯಂತಿ ಎಂಬವರು ಚಿನ್ನದ ಸರ ಕಳೆದುಕೊಂಡವರಾಗಿದ್ದಾರೆ. ಗುರುವಾರದಂದು ಮಧ್ಯಾಹ್ನ ಗೂಡಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾಗ ಸ್ಕೂಟರ್ನಲ್ಲಿ ಇಬ್ಬರು ಅಪರಿಚಿತರು ಅಂಗಡಿ ಬಳಿಗೆ ಬಂದು ಓರ್ವ ಸಿಗರೇಟು ಕೇಳಿದ್ದು ಸಿಗರೇಟ್ ಪ್ಯಾಕ್ ನೀಡಲು ತಯಾರಿಯಲ್ಲಿರುವಾಗ ಅಪರಿಚಿತ ಏಕಾಏಕಿ ಗೂಡಂಗಡಿಯ ಡ್ರಾಯರ್ಗೆ ಕೈ ಹಾಕಲು ಪ್ರಯತ್ನಿಸಿ ಬಳಿಕ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಎಳೆದೊಯ್ದು ಓಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂದರ್ಭ ಮಹಿಳೆ ಬೊಬ್ಬಿಟ್ಟಾಗ ಸ್ಥಳಕ್ಕೆಧಾವಿಸಿ ಬಂದ ಸ್ಥಳೀಯರು ಅಪರಿಚಿತರ ಹುಡುಕಾಟ ನಡೆಸಿದರೂ ಆರೋಪಿತರ ಪತ್ತೆಯಾಗಲಿಲ್ಲ. ಸರ ಸುಮಾರು 16 ಗ್ರಾಂ ತೂಕ ಹೊಂದಿದ್ದು ಇದರ ಮೌಲ್ಯ ರೂ.80 ಸಾವಿರ ಎಂದು ಮಹಿಳೆ ಬೆಳ್ಳಾರೆ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.