DAKSHINA KANNADA
ಓಖಿ ಚಂಡಮಾರುತಕ್ಕೆ ಸಿಲುಕಿದ 13 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
ಓಖಿ ಚಂಡಮಾರುತಕ್ಕೆ ಸಿಲುಕಿದ 13 ಮೀನುಗಾರರನ್ನು ರಕ್ಷಿಸಿದ ಕೋಸ್ಟ್ ಗಾರ್ಡ್
ಮಂಗಳೂರು ಡಿಸೆಂಬರ್ 6: ಓಖಿ ಚಂಡಮಾರುತಕ್ಕೆ ಸಿಲುಕಿ ಮುಳುಗಡೆಯಾಗುತ್ತಿದ್ದ ಮೀನುಗಾರಿಕಾ ಬೋಟ್ ನಿಂದ 13 ಮಂದಿ ಮೀನುಗಾರರನ್ನು ಭಾರತೀಯ ತಟ ರಕ್ಷಣಾ ಪಡೆ ರಕ್ಷಿಸಿದೆ.
ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಲಕ್ಷದ್ವೀಪದ ಮೀನುಗಾರಿಕಾ ಬೋಟ್ ಬಾರಾಕುಡಾ ಮಲ್ಪೆ ಬಳಿಯ ಸಮುದ್ರದಲ್ಲಿ ಮುಳುಗುವ ಹಂತಕ್ಕೆ ತಲುಪಿತ್ತು. ಮಾಹಿತಿ ಪಡೆದ ಭಾರತೀಯ ತಟರಕ್ಷಣಾ ಪಡೆಯ ಅಮರ್ತ್ಯ ಗಸ್ತು ಹಡಗು ಮೀನುಗಾರರನ್ನು ರಕ್ಷಿಸಿದೆ.
ಲಕ್ಷದ್ವೀಪದ ಈ ಮೀನುಗಾರಿಕಾ ಬೋಟ್ ಡಿಸೆಂಬರ್ 3 ರಂದು ಓಖಿ ಚಂಡಮಾರುತಕ್ಕೆ ಸಿಲುಕಿತ್ತು. ಚಂಡಮಾರುತದ ಅಬ್ಬರಕ್ಕೆ ಬೋಟ್ ನ ಎಂಜಿನ್ ತುಂಬಾ ನೀರು ತುಂಬಿಕೊಂಡು ಮುಳುಗು ಹಂತಕ್ಕೆ ಬಂದಿತ್ತು. ಈ ಬೋಟ್ ನಲ್ಲಿ 13 ಮಂದಿ ಮೀನುಗಾರರಿದ್ದರು. ಓಖಿ ಚಂಡಮಾರುತದ ಅಬ್ಬರಕ್ಕೆ ಮೀನುಗಾರಿಕಾ ಬೋಟ್ ನಲ್ಲಿದ್ದ ಸಂವಹನ ಉಪಕರಣಗಳನ್ನು ಹಾಳಾಗಿದ್ದವು, ಬೋಟ್ ನಲ್ಲಿದ್ದ ಆಹಾರ ಸಾಮಾಗ್ರಿಗಳು ಸಮುದ್ರಪಾಲಾಗಿದ್ದು, ಮಲ್ಪೆ ಸಮೀಪದ 18 ಕಿಲೋ ಮೀಟರ್ ದೂರದ ಸಮುದ್ರದಲ್ಲಿ ಮುಳುಗುವ ಹಂತಕ್ಕೆ ತಲುಪಿತ್ತು.
ಈ ಬಗ್ಗೆ ಇಂದು ಬೆಳಿಗ್ಗೆ ಭಾರತೀಯ ತಟ ರಕ್ಷಣಾ ಪಡೆ ಮಲ್ಪೆ ಸಮೀಪ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಒಂದು ಮುಳುಗಡೆ ಹಂತದಲ್ಲಿದೆ ಎಂಬ ಮಾಹಿತಿ ಬಂದಿತ್ತು. ತಕ್ಷಣ ಕಾರ್ಯ ಪ್ರವೃತ್ತರಾದ ತಟರಕ್ಷಣಾ ಪಡೆಯ ಅಮರ್ತ್ಯ ಗಸ್ತು ಹಡಗು ಕಾರ್ಯಾಚರಣೆಗಿಳಿದು ಮುಳುಗುವ ಬೋಟ್ ನಲ್ಲಿ ಎಲ್ಲಾ 13 ಮಂದಿ ಮೀನುಗಾರರನ್ನು ರಕ್ಷಿಸಿದೆ. ರಕ್ಷಿಸಿದ ಮೀನುಗಾರರನ್ನು ಸುರಕ್ಷಿತವಾಗಿ ನವಮಂಗಳೂರು ಬಂದರಿಗೆ ತಟರಕ್ಷಣಾ ಪಡೆ ಕರೆ ತಂದಿದೆ.
You must be logged in to post a comment Login