DAKSHINA KANNADA
ಸುರತ್ಕಲ್ : ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪಾವಂಜೆ ನದಿಯಲ್ಲಿ ಶವವಾಗಿ ಪತ್ತೆ..!
ಮಂಗಳೂರು : ಮಂಗಳವಾರ ನಾಪತ್ತೆಯಾಗಿದ್ದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ವರು ಮಕ್ಕಳ ಮೃತ ದೇಹಗಳು ಹಳೆಯಂಗಡಿ ಪಾವಂಜೆ ನದಿಯಲ್ಲಿ ಪತ್ತೆಯಾಗಿದೆ.
10ನೇ ತರಗತಿ ಕಲಿಯುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಮೃತ ದೇಹಗಳು ಹಳೆಯಂಗಡಿ ಕರಿತೋಟ ಎಂಬಲ್ಲಿ ಪೊಲೀಸರಿಗೆ ಮಂಗಳವಾರ ತಡ ರಾತ್ರಿ ಸಿಕ್ಕಿದ್ದು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುರತ್ಕಲ್ ನ ವಿದ್ಯಾದಾಯಿನೀ ಶಾಲೆಯ ವಿಧ್ಯಾರ್ಥಿಗಳಾದ ಯಶ್ವಿತ್, ನಿರೂಪ್, ಅನ್ವಿತ್, ರಾಘವೇಂದ್ರ ಮೃತ ವಿದ್ಯಾರ್ಥಿಗಳಾಗಿದ್ದು ಸುರತ್ಕಲ್ ನ ವಿದ್ಯಾದಾಯಿನೀ ಶಾಲೆಯಲ್ಲಿ ಹತ್ತನೇ ತರಗತಿ ಕಲಿಯುತ್ತಿದ್ದ ನಾಲ್ವರು ವಿಧ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಇಂಗ್ಲಿಷ್ ಪ್ರಿಪರೇಟರಿ ಪರೀಕ್ಷೆ ಬರೆದ ಬಳಿಕ ನಾಪತ್ತೆಯಾಗಿದ್ದರು.
ವಿದ್ಯಾರ್ಥಿಗಳ ಪೋಷಕರಿಂದ ನಾಪತ್ತೆ ಪ್ರಕರಣ ಮಂಗಳವಾರ ರಾತ್ರಿ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಸುರತ್ಕಲ್, ಮುಲ್ಕಿ ಪೊಲೀಸರು ಶಾಲೆ ಮತ್ತು ಬಸ್ ನಿಲ್ದಾಣದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ತರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಸುರತ್ಕಲ್ ಬಸ್ ನಿಲ್ದಾಣದಿಂದ ಬಸ್ ಹತ್ತಿ ಹಳೆಯಂಗಡಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವುದನ್ನು ಸಿಸಿಟಿವಿಯಲ್ಲಿ ಪತ್ತೆಹಚ್ಚಿತ್ತಾರೆ. ಈ ಸಂದರ್ಭ ವಿದ್ಯಾರ್ಥಿಯೋರ್ವನ ಬಳಿ ಇತ್ತೆನ್ನಲಾದ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ವಿದ್ಯಾರ್ಥಿಗಳು ನದಿಯ ದಡಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನದಿಯ ದಡದಲ್ಲಿ ಮಕ್ಕಳ ಶಾಲೆಯ ಚೀಲಗಳು, ಚಪ್ಪಲಿ ಶಾಲೆಯ ಸಮವಸ್ತ್ರಗಳು ಪತ್ತೆಯಾಗಿವೆ. ಸ್ಥಳೀಯರ ಸಹಾಯದಿಂದ ನದಿಯಲ್ಲಿ ಹುಡುಕಾಡಿದಾಗ ನಾಲ್ಕೂ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಸುಮಾರು 10 ವಿದ್ಯಾರ್ಥಿಗಳು ಪಾವಂಜೆ ನದಿ ಬದಿ ತೆರಳಿದ್ದು ಅದಲ್ಲಿ ಕೆಲ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದರು ಅದರಲ್ಲಿ ಈ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login