KARNATAKA
ಎಸ್ ಡಿಪಿಐ ನಿಷೇಧಕ್ಕೆ ಗಟ್ಟಿ ಸಾಕ್ಷ್ಯಗಳಿಲ್ಲ – ಸಚಿವ ಮಾಧುಸ್ವಾಮಿ
ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗಲಭೆಗಳಲ್ಲಿ ಎಸ್ ಡಿಪಿಐ ಪಾತ್ರ ಇದೆ ಎಂಬ ಆರೋಪದ ಹಿನ್ನಲೆ ಎಸ್ ಡಿಪಿಐ ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಈ ಕುರಿತಂತೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಖಾತೆಯ ಸಚಿವ ಮಾಧುಸ್ವಾಮಿ ಎಸ್ಡಿಪಿಐ ನಿಷೇಧ ಸಂಬಂಧವಾಗಿ ಕಾನೂನು ಮೂಲಕ ಏನು ಮಾಡಬಹುದೆಂದು ಚರ್ಚೆ ನಡೆದಿದೆ. ಪೊಲೀಸ್ ಇಲಾಖೆಯಿಂದ ಇನ್ನಷ್ಟು ಮಾಹಿತಿಯನ್ನು ಕೇಳಲಾಗಿದೆ. ಪೊಲೀಸ್ ಇಲಾಖೆ ವರದಿ ಕೊಟ್ಟ ಬಳಿಕ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಎಸ್ಡಿಪಿಐ ಬಗ್ಗೆ ಇಲ್ಲಿಯವರೆಗೆ ಗಟ್ಟಿ ಸಾಕ್ಷ್ಯಗಳು ಸಿಕ್ಕಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದು ಸಾಬೀತಾರೆ ನಿಷೇಧ ಮಾಡುತ್ತೇವೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಂಘಟನೆ ನಿಷೇಧಕ್ಕೆ ನಮ್ಮ ಬಳಿ ಸಮರ್ಪಕವಾಗಿರುವ ಪರಾವೆ ಇಲ್ಲದೇ ಇರುವುದರಿಂದ ಸದ್ಯ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಅಲ್ಲದೆ ಎಸ್ಡಿಪಿಐ ರಾಜಕೀಯ ಪಕ್ಷವಾಗಿದ್ದು ನಿಷೇಧ ಮಾಡಲು ಕಾನೂನಾತ್ಮಕ ಸಾಧ್ಯಾಸಾಧ್ಯತೆಗಳ ಕುರಿತಾಗಿ ಪರಿಶೀಲನೆ ನಡೆಸಿ ಅಗತ್ಯ ಬಿದ್ದರೆ ಕಾನೂನಿನ ತಿದ್ದುಪಡಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
You must be logged in to post a comment Login