ಚಿಕ್ಕಮಗಳೂರು ಜುಲೈ 11: ಚಿಕ್ಕಮಗಳೂರು -ತಿರುಪತಿ ರೈಲು ಸೇವೆ ಇಂದಿನಿಂದ ಆರಂಭವಾಗಿದೆ. ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ರೈಲಿಗೆ ಚಾಲನೆ ನೀಡಿದರು.

ಮಲೆನಾಡು ಜನರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ ಸಂಸದ ಕೋಟ ಪರಿಶ್ರಮದಿಂದ ಚಿಕ್ಕಮಗಳೂರಿನಿಂದ ತಿರುಪತಿಗೆ ನೇರ ರೈಲು ಪ್ರಾರಂಭವಾಗಿದೆ. ಇಂದು ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ವೇಳೆ 85 ವರ್ಷದ ವೃದ್ಧೆ ಲಕ್ಷ್ಮೀ ಎಂಬುವರು ರೈಲಿಗೆ ನಮಸ್ಕರಿಸಿದರು. ರೈಲಿನ ಹಳಿಗೆ ಇಳಿದ ಇವರು ರೈಲಿಗೆ ಮೂರು ಬಾರಿ ನಮಸ್ಕರಿಸಿ ಕಾಣಿಕೆ ಇಟ್ಟು ಭಕ್ತಿಯ ಧಾರೆ ಎರೆದಿದ್ದಾರೆ.
ಬಳಿಕ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೃದ್ಧೆ ಲಕ್ಷ್ಮೀ, “ನಾನು ಐದು ಬಾರಿ ತಿರುಪತಿಗೆ ಹೋಗಿದ್ದೇನೆ. ಆದರೆ, ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲು ಸೇವೆ ಆರಂಭವಾಗುತ್ತಿರುವುದು ತುಂಬಾ ಖುಷಿಯಾಗುತ್ತಿದೆ. ನನ್ನ ಮಗ ಯೋಧ. ನನ್ನನ್ನು ರೈಲಿನಲ್ಲಿ ದೇಶ ಸುತ್ತಿಸಿದ್ದಾನೆ. ತಿರುಪತಿಗೆ ನಾನು ರೈಲಿನಲ್ಲಿ ಒಂದು ತಿಂಗಳು ಬಿಟ್ಟು ಹೋಗುತ್ತೇನೆ. ರೈಲು ಬಂದಿದ್ದು ಅನುಕೂಲವಾಯಿತು” ಎಂದರು.
ಈ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ನಿಜಕ್ಕೂ ಇದೊಂದು ಭಾವುಕ ಕ್ಷಣ. ಸಾವಿರಾರು ಮಂದಿ ಭಕ್ತರನ್ನು ಹೊತ್ತೊಯ್ಯುವ ಈ ರೈಲಿಗೆ ಭಕ್ತಿಯ ಸ್ಪರ್ಶ ನೀಡಿದ ಲಕ್ಷ್ಮೀ ಬಾಯಿಯನ್ನು ಕಂಡು ಮೂಕವಿಸ್ಮಿತನಾದೆ. ಒಂದರ್ಥದಲ್ಲಿ ನಮ್ಮ ನಿಯಮಬದ್ಧ ಚಾಲನೆಗೂ ಮೊದಲೇ ಆಕೆ ಭಕ್ತಿಯ ಚಾಲನೆ ನೀಡಿದ್ದರು. ಚಿಕ್ಕಮಗಳೂರು-ಬೆಂಗಳೂರು-ತಿರುಪತಿ ಪ್ರಯಾಣಿಸುವ “ದತ್ತಪೀಠ ಎಕ್ಸ್ಪ್ರೆಸ್” ರೈಲು ಅಸಂಖ್ಯ ಭಕ್ತಾದಿಗಳಿಗೆ ಭಕ್ತಿಯ ರಥವಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.