ಪುತ್ತೂರು,ಸೆಪ್ಟಂಬರ್ 15: ದಕ್ಷಿಣಕನ್ನಡ ಜಿಲ್ಲೆಯಲ್ಲಿರುವಅಧಿಕಾರಿಗಳು ಪ್ರಾಮಾಣಿಕರು, ದಕ್ಷ ಹಾಗೂ ಜಾತ್ಯಾತೀತವಾದಿಗಳೇ ಆದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಕ್ರಮ ಗೋಸಾಗಾಟ ತಡೆಗೆ ಪ್ರತ್ಯೇಕ ಗೇಟುಗಳನ್ನು ನಿರ್ಮಾಣ ಮಾಡಿ ಎಂದು ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದ್ದಾರೆ.
ಪುತ್ತೂರು ಸಂಪ್ಯ ಪೋಲೀಸ್ ಠಾಣೆಯ ಎಸ್.ಐ. ಅಬ್ದುಲ್ ಖಾದರ್ ಹಾಗೂ ಸಿಬ್ಬಂದಿಗಳ ವಿರುದ್ಧ ನಡೆದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಸಂಪ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಗೋವುಗಳ ಅಕ್ರಮ ಸಾಗಾಟ ನಡೆಯುತ್ತಿದ್ದರೂ, ಠಾಣಾಧಿಕಾರಿ ಗೋ ಸಾಗಾಟಗಾರರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಆರೋಪಿಸಿದ ಅವರು ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕ,ದಕ್ಷ ಹಾಗೂ ಜಾತ್ಯಾತೀತವಾದಿಗಳಾದಲ್ಲಿ ಗೋವಿನ ಸಂಬಂಧ ನಡೆಯುವ ಘರ್ಷಣೆಯನ್ನು ತಡೆಯಲಿ.
ಪ್ರತಿ ತಾಲೂಕುಗಳಲ್ಲೂ ಪ್ರತ್ಯೇಕ ಗೇಟುಗಳನ್ನು ನಿರ್ಮಿಸಿ ಗೋ ಸಾಗಾಟವನ್ನು ತಡೆಯಿರಿ ಎಂದರು. ಅದಕ್ಕೆ ವಿರುದ್ಧವಾಗಿ ಗೋ ಸಾಗಾಟಗಾರರಿಗೇ ನೆರವು ನೀಡುವುದನ್ನು ಮುಂದುವರಿಸಿದ್ದೇ ಆದಲ್ಲಿ ಗೋ ರಕ್ಷಕರೇ ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಇದೇ ಸಂದರ್ಭದಲ್ಲಿ ಪೋಲೀಸ್ ಇಲಾಖೆಗೆ ಸ್ಪಷ್ಟಪಡಿಸಿದರು.
ಎಸ್.ಐ ಹಾಗೂ ಇತರ ಇಬ್ಬರು ಪೋಲೀಸರ ಮೇಲೆ ಮೇಲಾಧಿಕಾರಿಗಳು ಕ್ರಮ ಜರುಗಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಸಂಪ್ಯ ಠಾಣೆಗೆ ಮುತ್ತಿಗೆ ಹಾಕಲೂ ಕಾರ್ಯಕರ್ತರು ಸಿದ್ಧರಿದ್ದಾರೆ ಎನ್ನುವ ಎಚ್ಚರಿಕೆಯನ್ನೂ ನೀಡಿದರು.