Connect with us

    LATEST NEWS

    ಪ್ರತಿಭಟನೆಗೆ ಸೀಮಿತವಾದ ಗೋರಕ್ಷಣೆ ರಕ್ಷಿಸಿದ ಗೋವುಗಳನ್ನು ಸಾಕಲು ಹಿಂದೇಟು ಹಾಕುವ ಸಂಘಟನೆಗಳು !

    ಪ್ರತಿಭಟನೆಗೆ ಸೀಮಿತವಾದ ಗೋರಕ್ಷಣೆ ರಕ್ಷಿಸಿದ ಗೋವುಗಳನ್ನು ಸಾಕಲು ಹಿಂದೇಟು ಹಾಕುವ ಸಂಘಟನೆಗಳು !

    ಮಂಗಳೂರು ಡಿಸೆಂಬರ್ 20: ಗೋ ರಕ್ಷಣೆ ಹೆಸರಿನಲ್ಲಿ ಗಲಾಟೆ, ದಾಳಿ ನಡೆಸುವ ಹಿಂದೂ ಸಂಘಟನೆಗಳು ಪೊಲೀಸರು ರಕ್ಷಿಸಿದ ಗೋವುಗಳನ್ನು ಸಾಕಲು ಹಿಂದೇಟು ಹಾಕಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಗೋರಕ್ಷಣೆಯ ವಿಚಾರದಲ್ಲಿ ಬೀದಿ ರಂಪಾಟ ಮಾಡಿ ಕೋಮುಸಂಘರ್ಷಕ್ಕೆ ಕಾರಣವಾಗಿರುವ ಘಟನೆಗಳು ನಡೆದಿರುವಂತಹ ಮಂಗಳೂರಿನಲ್ಲಿ ತದ್ವಿರುದ್ಧ ಘಟನೆಯೊಂದು ನಡೆದಿದ್ದು, ಈ ಘಟನೆ ಸಂಘಟನೆಗಳ ಮಾನವನ್ನೇ ಹರಾಜಾಗುವಂತೆ ಮಾಡಿದೆ.

    ಮಂಗಳೂರಿನ ಸಿಸಿಬಿ ಪೊಲೀಸರು ಸೋಮವಾರ ರಾತ್ರಿ 10 ಚಕ್ರದ ಕಂಟೇನರ್ ಲಾರಿಯೊಂದನ್ನು ಪಂಪ್ ವೆಲ್ ವೃತ್ತದಲ್ಲಿ ಅಡ್ಡಗಟ್ಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಲಾರಿ ಕಂಟೇನರ್ ನಲ್ಲಿ ಗೋವುಗಳನ್ನು ತುಂಬಿಕೊಂಡಿದ್ದು ಗಮನಕ್ಕೆ ಬಂದಿದೆ. 24 ದೊಡ್ಡ ಗಾತ್ರದ ಹೈಬ್ರಿಡ್ ತಳಿಯ ಹೋರಿಗಳು ಮತ್ತು ಏಳು ಎಮ್ಮೆಗಳನ್ನು ಒಂದೇ ಲಾರಿಯಲ್ಲಿ ತುಂಬಿಸಲಾಗಿತ್ತು. ಯಾವುದೇ ದಾಖಲೆ ಪತ್ರಗಳಿಲ್ಲದೆ ಗೋವುಗಳ ಅಕ್ರಮ ಸಾಗಾಟ ನಡೆಸುತ್ತಿದ್ದ ಕಾರಣ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದರು.

    ಹುಬ್ಬಳ್ಳಿಯಿಂದ ಮಂಗಳೂರಿನ ಮೂಲಕ ಕೇರಳಕ್ಕೆ ಸಾಗಿಸಲ್ಪಡುತ್ತಿದ್ದ ಗೋವುಗಳು ಪೊಲೀಸರ ಕಾರ್ಯಾಚರಣೆಯಿಂದ ಬದುಕುಳಿದಿದ್ದವು. ಲಾರಿಯಲ್ಲಿದ್ದ ಇಬ್ಬರು ಮತ್ತು ಲಾರಿಗೆ ಬೆಂಗಾವಲಾಗಿ ಬರುತ್ತಿದ್ದ ಇನ್ನೋವಾ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಬಳಿಕ ಪ್ರಕರಣವನ್ನು ಮಂಗಳೂರಿನ ನಗರ ಠಾಣೆಗೆ ವರ್ಗಾಯಿಸಿದ್ದರು.

    ಆದರೆ, ವಶಕ್ಕೆ ಪಡೆದ ಗೋವುಗಳನ್ನು ಸಲಹುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿ ಮಂಗಳೂರಿನ ಗೋಶಾಲೆಗಳಲ್ಲಿ ಗೋವುಗಳನ್ನು ತಾತ್ಕಾಲಿಕ ನೆಲೆಯಲ್ಲಿ ಇರಿಸಿಕೊಳ್ಳಲು ಪೊಲೀಸರು ಮನವಿ ಮಾಡಿದ್ದರು. ಆದರೆ, ದೊಡ್ಡ ಗಾತ್ರದ ಎತ್ತು ಮತ್ತು ಎಮ್ಮೆಗಳಾಗಿದ್ದರಿಂದ ಅವುಗಳ ಪಾಲನೆಗೆ ಗೋಶಾಲೆಗಳು ನಿರಾಕರಿಸಿದ್ದವು.

    ಗೋ ಕಳ್ಳರನ್ನು ಪೊಲೀಸರು ಹಿಡಿಯಲ್ಲವೆಂದು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದ ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ, ಪೊಲೀಸರು ಹಿಡಿದು ಕೊಟ್ಟ ಗೋವುಗಳನ್ನು ಸಲಹುವುದಕ್ಕೆ ನಿರಾಕರಿಸಿದ್ದರೆ. ಅಲ್ಲದೆ ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಗೆ ಸೇರಿದ ಬಹಳಷ್ಟು ಗೋಶಾಲೆಗಳಿವೆ. ಸರಕಾರದಿಂದ ಲಕ್ಷಾಂತರ ರೂಪಾಯಿ ಅನುದಾನವನ್ನು ಈ ಗೋಶಾಲೆಗಳು ಪಡೆಯುತ್ತಿವೆ.

    ಮಂಗಳೂರು ನಗರ ಹೊರವಲಯದ ಪಜೀರಿನಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ ಸೇರಿದ ಗೋಶಾಲೆಗೆ 12 ಲಕ್ಷ ರೂ. ಸೇರಿದಂತೆ ಮಂಗಳೂರಿನ ವಿವಿಧ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ 25 ಲಕ್ಷ ರೂ.ಗಳ ಚೆಕ್ ವಿತರಿಸಿದ್ದರು.

    ಎರಡು ತಿಂಗಳ ಹಿಂದೆ ಮಂಗಳೂರಿನ ಸ್ಮಾರ್ಟ್ ಸಿಟಿಯ ಅನುದಾನದಡಿ 15 ಕೋಟಿ ಮೊತ್ತವನ್ನು ಕುದ್ರೋಳಿ ಕಸಾಯಿಖಾನೆಗೆ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಸಾಯಿಖಾನೆಗೆ ಹಣ ನೀಡುತ್ತಾರೆ, ಗೋಶಾಲೆಗೆ ಅನುದಾನ ನೀಡಲ್ಲ ಅನ್ನುವ ಆರೋಪವನ್ನು ಹಿಂದೂ ಸಂಘಟನೆಗಳು ಮಾಡಿದ್ದವು. ಅಲ್ಲದೆ, ಕುದ್ರೋಳಿ ಕಸಾಯಿಖಾನೆಗೆ ಅನುದಾನ ನೀಡದಂತೆ ಪ್ರತಿಭಟನೆಯನ್ನೂ ನಡೆಸಿದ್ದವು.

    ಬಹುತೇಕ ಗೋಶಾಲೆಗಳಿಗೆ ಸರ್ಕಾರದ ಗೋಮಾಳ ಭೂಮಿಯನ್ನು ಉಚಿತವಾಗಿ ಕೊಡಲಾಗಿದೆ. ಗೋವುಗಳ ಪಾಲನೆಯ ಉದ್ದೇಶದಿಂದಲೇ ಪಜೀರು ಗೋಶಾಲೆಗೆ ಹತ್ತು ಎಕರೆ ಗೋಮಾಳ ಭೂಮಿಯನ್ನು ನೀಡಲಾಗಿತ್ತು ಅನ್ನೋದನ್ನು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿ ಹೇಳುತ್ತಾರೆ. ಅಲ್ಲದೆ, ಪಜೀರು ಗೋಶಾಲೆ ವಿಶ್ವ ಹಿಂದು ಪರಿಷತ್ತಿನ ಮುಖಂಡರಿಗೆ ಸೇರಿದ್ದರೂ, ಗೋವುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಗೋವಿನ ವಿಚಾರದಲ್ಲಿ ಬೀದಿ ರಾಜಕೀಯ ಮಾಡುವ ಸಂಘಟನೆಗಳ ಮುಖವಾಡವನ್ನೇ ಕಳಚುವಂತೆ ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply