Connect with us

    LATEST NEWS

    ವಯಸ್ಸಿನ ಹಿನ್ನಲೆ ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ, ಜೋಶಿಗಿಲ್ಲ ಆಹ್ವಾನ… ಆದರೆ ದೇವೆಗೌಡರಿಗೆ ಇದೆ …!!

    ನವದೆಹಲಿ ಡಿಸೆಂಬರ್ 19: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಬಿಜೆಪಿಯ ಹಿರಿಯ ಮುಖಂಡರು ಅಯೋಧ್ಯೆ ಜನ್ಮಭೂಮಿ ಹೋರಾಟದ ಪ್ರಮುಖರಾದ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ಅವರಿಗೆ ಬರದಂತೆ ಮನವಿ ಮಾಡಲಾಗಿದೆ.ವಯಸ್ಸಿನ ಕಾರಣಕೊಟ್ಟು ಇಬ್ಬರು ಮುಖಂಡರನ್ನು ಉದ್ಘಾಟನಾ ಸಮಾರಂಭದಿಂದ ಹೊರಗಿಟ್ಟಿದ್ದಾರೆ. ಆದರೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಉದ್ಘಾಟನೆಗೆ ಆಗಮಿಸುವಂತೆ ಆಹ್ವಾನ ಹೋಗಿದೆ.


    ಅಯೋಧ್ಯೆಯಲ್ಲಿ ರಾಮಮಂದಿರ ಆಂದೋಲನದ ನೇತೃತ್ವ ವಹಿಸಿದ್ದ ಹಿರಿಯ ಬಿಜೆಪಿ ನಾಯಕರಾದ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ಮುಂದಿನ ತಿಂಗಳು ದೇವಸ್ಥಾನದ ಉದ್ಘಾಟನಾ ಸಮಾರಂಭಕ್ಕೆ ಬರದಂತೆ ‘ಸಲಹೆ’ ನೀಡಲಾಗಿದೆ ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಸೋಮವಾರ ಮಾಧ್ಯಮಗಳಿಗೆ ತಿಳಿಸಿದರು, ಇಬ್ಬರೂ ಕುಟುಂಬದ ಗೌರವಾನ್ವಿತ ಹಿರಿಯರು ಮತ್ತು ಅವರ ಆರೋಗ್ಯ ಮತ್ತು ವಯಸ್ಸನ್ನು ಗಮನದಲ್ಲಿಟ್ಟುಕೊಂಡು ದೂರವಿರಲು ಸಲಹೆ ನೀಡಲಾಗಿದ್ದು ಮತ್ತು ಅದನ್ನು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.


    ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಸಿದ್ದತೆಗಳನ್ನು ನಡೆಸಲಾಗುತ್ತಿದೆ. ಜನವರಿ 15 ರೊಳಗೆ ಸಿದ್ಧತೆಗಳು ನಡೆಯಲಿದ್ದು, ಜನವರಿ 16 ರಿಂದ ‘ಪ್ರಾಣ ಪ್ರತಿಷ್ಠಾ’ ಪೂಜೆ ಪ್ರಾರಂಭವಾಗಿ ಜನವರಿ 22 ರವರೆಗೆ ನಡೆಯಲಿದೆ ಎಂದು ಅವರು ಹೇಳಿದರು.

    ಅಡ್ವಾಣಿಗೆ 96 ವರ್ಷ ವಯಸ್ಸಾಗಿದ್ದು, ಮುರಳಿ ಮನೋಹರ ಜೋಶಿಯವರು ಮುಂದಿನ ತಿಂಗಳು 90ಕ್ಕೆ ಕಾಲಿಡಲಿದ್ದಾರೆ. ಈ ನಡುವೆ ಅಡ್ವಾಣಿ ಹಾಗೂ ಜೋಶಿ ಅವರನ್ನು ಸಮಾರಂಭಕ್ಕೆ ಬರದಂತೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ವಯಸ್ಸಿನ ಹಿನ್ನಲೆ ಕಾರಣ ಕೊಟ್ಟರೂ ಇದೇ ವೇಳೆ ಜೆಡಿಎಸ್ ವರಿಷ್ಠರಾದ 91 ವರ್ಷ ವಯಸ್ಸಿನ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply