KARNATAKA
ಮಂಡ್ಯ: ಪೊಲೀಸ್ ಠಾಣೆಯಲ್ಲೇ ಮಹಿಳಾ ಪೇದೆಗಳಿಗೆ ಸೀಮಂತ ಕಾರ್ಯ..!

ಮಂಡ್ಯ: ಮಂಡ್ಯಜಿಲ್ಲೆಯ ಕೆ ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಇಬ್ಬರು ಮಹಿಳಾ ಸಿಬ್ಬಂದಿಗೆ ಸೀಮಂತ ಶಾಸ್ತ್ರ ಅಧಿಕಾರಿಗಳು ನೆರವೇರಿಸಿಕೊಟ್ಟಿದ್ದು ಪೊಲೀಸ್ ಅಧಿಕಾರಿಗಳ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
.

ಸರ್ಕಲ್ ಇನ್ಸ್ಪೆಕ್ಟರ್ ಸುಮಾರಾಣಿ ಅವರ ಮುಂದಾಳತ್ವದಲ್ಲಿ ಇಬ್ಬರು ಮಹಿಳಾ ಸಿಬಂದಿಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ ಅರಿಶಿಣ ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಮಾಡಿದರು.ಸಾಮಾನ್ಯವಾಗಿ ಸೀಮಂತವನ್ನು ಮನೆಯವರ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಆದರೆ, ಮಹಿಳಾ ಸಿಬ್ಬಂದಿಗೆ ಸಹೋದ್ಯೋಗಿಗಳು ಸೀಮಂತ ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿತ್ತು.
ಕೆ.ಆರ್. ಪೇಟೆ ಪಟ್ಟಣ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ಗಳಾದ ಶಾರದಾ ಮತ್ತು ಅಸ್ಮಾಬಾನು ಅವರಿಗೆ ಸೀಮಂತ ಸಂಸ್ಕಾರ ನಡೆಸಲಾಯಿತು. ಈ ವೇಳೆ ಠಾಣೆಯ ಸಿಬ್ಬಂದಿ, ಮಹಿಳಾ ಪೇದೆಗಳ ಕುಟುಂಬಸ್ಥರು ಸಂಭ್ರಮದಲ್ಲಿ ಪಾಲ್ಗೊಂಡರು. ಸೀಮಂತ ಕಾರ್ಯಕ್ರಮದ ಬಳಿಕ ಶಾರದಾ ಹಾಗೂ ಅಸ್ಮಾಬಾನು ಅವರಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಆರಕ್ಷಕ ಉಪನಿರೀಕ್ಷಕ ಸುನಿಲ್, ಸಹಾಯಕ ಆರಕ್ಷಕ ಉಪ ನಿರೀಕ್ಷಕ ಚಂದ್ರಶೇಖರ್ ಸೇರಿದಂತೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://youtu.be/wc6HzKMMKi0