ಮೈಸೂರು ಮೇ 25: ಹಿರಿಯ ಮಗಳು ಪ್ರೀತಿಗಾಗಿ ಅಪ್ಪ ಅಮ್ಮ ಮತ್ತು ತಂಗಿಯನ್ನು ಬಿಟ್ಟು ಹೋದ ಬೆನ್ನಲ್ಲೇ ಮರ್ಯಾದೆಗೆ ಅಂಜಿ ಮೂವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಮುನ್ನ ಕಾಲುಗಳಿಗೆ ಹಗ್ಗ ಕಟ್ಟಿ ಕೆರೆ ಹಾರಿದ್ದಾರೆ ಎಂದು ತಿಳಿದು ಬಂದಿದೆ. ಶನಿವಾರ ಮೈಸೂರಿನ ಹೆಚ್‌ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಮೃತ ದುರ್ದೈವಿಗಳು.


ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮಹದೇವಸ್ವಾಮಿ ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರು ಬಿಟ್ಟು ಹೆಚ್‌ಡಿ.ಕೋಟೆಯಲ್ಲಿ ವಾಸವಿದ್ದರು. ಅಲ್ಲಿಯೂ ಸ್ವಂತ ಮನೆ ಖರೀದಿ ಮಾಡಿದ್ದರು. ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು.


ಅರ್ಪಿತಾ ಮೈಸೂರಿನಲ್ಲಿ ಅನ್ಯಜಾತಿಯ ಹುಡುಗನ ಜೊತೆ ಪ್ರೀತಿಗೆ ಬಿದ್ದು, ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಳು. ತಂದೆ ಮಹದೇವಸ್ವಾಮಿ ಸಮುದಾಯದ ಜನರಿಗೆ ಹೆದರಿ ಮದುವೆ ನಿರಾಕರಿಸಿದ್ದರು. ತಂದೆ, ತಾಯಿ ನಿರ್ಧಾರವನ್ನು ಧಿಕ್ಕರಿಸಿ ಅರ್ಪಿತಾ ಮನೆ ಬಿಟ್ಟು ತೆರಳಿದ್ದಳು. ಮಗಳ ಈ ನಿರ್ಧಾರದಿಂದ ಮರ್ಯಾದೆ ಹೋಯಿತು ಎಂದು ಭಾವಿಸಿ ಮಹದೇವಸ್ವಾಮಿ, ಪತ್ನಿ ಹಾಗೂ ಕಿರಿಯ ಮಗಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಳೆಯಲ್ಲೇ ಶನಿವಾರ ರಾತ್ರಿ ಮೃತರ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಮಗ, ಸೊಸೆ ಹಾಗೂ ಮೊಮ್ಮಗಳ ಸಾವಿನಿಂದ ದಿಕ್ಕೇ ತೋಚದಂತೆ ಕುಳಿತ ವೃದ್ಧ ತಂದೆ ಹಾಗೂ ಮಗನ ಸಾವಿನ ದಿಗ್ಭ್ರಮೆಯಲ್ಲಿ ತಾಯಿ ಕಣ್ಣೀರ ಕೋಡಿ ಹರಿಸಿದ್ದಾರೆ. ಮೃತದೇಹಗಳ ಎದುರು ಮಹದೇವಸ್ವಾಮಿ ಅವರ ತಾಯಿ ಮುಂದೆ ನಾನು ಏನು ಮಾಡಲಿ ಎಂದು ಅತ್ತು ಕರೆಯುತ್ತಾ ಗೋಳಾಡಿದರು. ಮಹದೇವಸ್ವಾಮಿ ಅವರ ಜಮೀನಲ್ಲೇ ಒಂದೇ ಚಿತೆಯಲ್ಲಿ ಸಾಲಾಗಿ ಮಲಗಿಸಿ ತಂದೆ, ತಾಯಿ ಹಾಗೂ ಮಗಳ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ನೆರವೇರಿಸಿದರು.

Share Information