KARNATAKA
ಚಿಕ್ಕಮಗಳೂರು: ಹೆತ್ತ ಮಗುವನ್ನ ಮಾರಾಟ ಮಾಡಿದ ತಾಯಿ!

ಚಿಕ್ಕಮಗಳೂರು, ಜೂನ್ 01: ಜನಿಸಿದ ಎರಡೇ ದಿನಕ್ಕೆ ಹೆಣ್ಣು ಮಗುವನ್ನು ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದ ದಂಪತಿ ಹಾಗೂ ನಿವೃತ್ತ ನರ್ಸ್ರನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಹರಾವರಿ ಗ್ರಾಮದ ಕೋಣನಗುಡ್ಡದ ರತ್ನಾ ಎಂಬುವರನ್ನು ಹೆರಿಗೆಗಾಗಿ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ. 22 ರಂದು ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಮಗು ಹುಟ್ಟಿದ ಎರಡೇ ದಿನಕ್ಕೆ ರತ್ನಾ ಕೊಪ್ಪದ ನಿವೃತ್ತ ನರ್ಸ್ ಕುಸುಮ ಎಂಬುವರ ಮೂಲಕ 1 ಲಕ್ಷ ರೂಪಾಯಿಗೆ ಕಾರ್ಕಳದ ರಾಘವೇಂದ್ರ ಅವರಿಗೆ ಮಾರಾಟ ಮಾಡಿದ್ದಾರೆ.

ಎರಡು ದಿನದ ಹಸುಗೂಸು ಮಾರಾಟದ ವಿಚಾರ ತಿಳಿದ ಎನ್.ಆರ್ ಪುರ ಠಾಣೆಯ ಪಿಎಸ್ಐ ನಿರಂಜನಗೌಡ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿ, ಪ್ರಕರಣ ಭೇದಿಸಿದರು. ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಕಾರ್ಕಳಕ್ಕೆ ತೆರಳಿ ಮಗುವನ್ನು ಸುರಕ್ಷಿತವಾಗಿ ತಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಇನ್ನು, ಮಗು ದತ್ತು ಪಡೆದ ರಾಘವೇಂದ್ರ, ನಿವೃತ್ತ ನರ್ಸ್ ಕುಸುಮ ಅವರ ಸಹೋದರ. ತಮಗೆ ಮಕ್ಕಳು ಇಲ್ಲದೆ ಇರುವುದರಿಂದ ಸಾಕಲು ಮಗು ಪಡೆದಿದ್ದೇನೆ ಎಂದು ರಾಘವೇಂದ್ರ ಪೊಲೀಸರ ಮುಂದೆ ಹೇಳಿದ್ದಾರೆ.
ರತ್ನಾ-ಸದಾನಂದ ದಂಪತಿಗೆ ಮೂವರು ಮಕ್ಕಳಿದ್ದು, ಇಬ್ಬರನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಎನ್.ಆರ್ ಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಮಗುವಿನ ತಂದೆ ಸದಾನಂದ ಮತ್ತು ತಾಯಿ ರತ್ನಾ ಹಾಗೂ ಮಗು ಮಾರಾಟಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ ನಿವೃತ್ತ ನರ್ಸ್ ಕುಸುಮ ಅವರನ್ನು ಬಂಧಿಸಿದ್ದಾರೆ.
ಒಟ್ಟಿನಲ್ಲಿ ಜನ್ಮ ಕೊಟ್ಟ ತಾಯಿಯೇ ಮಗು ಹುಟ್ಟಿದ ಎರಡೇ ದಿನಕ್ಕೆ ಒಂದು ಲಕ್ಷ ಹಣಕ್ಕೆ ಮಾರಾಟ ಮಾಡಿ ಪೊಲೀಸರ ಕೈಗೆ ತಗಲಾಕೊಂಡಿದ್ದಾಳೆ. ಭೂಮಿಗೆ ಕಾಲಿಟ್ಟ ಎರಡೇ ದಿನಕ್ಕೆ ಹೆತ್ತ ತಾಯಿಂದ ದೂರವಾಗಿದ್ದ ಮಗು ಈಗ ಅನಾಥವಾಗಿದೆ.