ಅಹಮದಬಾದ್ :  ಗುಜರಾತಿನಲ್ಲಿ ಸಿಡಿಲು ಬಡಿದು 20 ಜನರು ಸಾವನ್ನಪ್ಪಿದ್ದು , ಅನೇಕರು ಗಾಯಗೊಂಡಿದ್ದಾರೆ. 22 ವರ್ಷದ ಯುವಕ ಬೈಕ್​​ನಲ್ಲಿ ಪ್ರಯಾಣಿಸುವಾಗ ಸಿಡಿಲು ಬಡಿದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಮೆಹ್ಸಾನಾ ಜಿಲ್ಲೆಯಲ್ಲಿ ಆಟೋರಿಕ್ಷಾ ಮೇಲೆ ಮರ ಬಿದ್ದು 29 ವರ್ಷದ ಯುವಕ ಮೃತಪಟ್ಟಿದ್ದಾನೆ. ಇದರ ಜತೆಗೆ ತಾಪಿ ಜಿಲ್ಲೆಯಲ್ಲಿ ಇಬ್ಬರು ಮತ್ತು ಸಬರ್ಕಾಂತ, ಅಹಮದಾಬಾದ್, ಮೆಹ್ಸಾನಾ ಮತ್ತು ದಾಹೋದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಕೆಲವು ಕಡೆ ಸಿಡಿಲಿನ ಅಬ್ಬರಕ್ಕೆ ದನ, ಕುರಿಗಳೂ ಸಾವನ್ನಪ್ಪಿವೆ. ಪಿಟಿಐ ಸುದ್ದಿ ಸಂಸ್ಥೆಯ ಪ್ರಕಾರ, ಗುಜರಾತ್‌ನ 251 ತಾಲೂಕುಗಳಲ್ಲಿ 220 ತಾಲೂಕುಗಳಲ್ಲಿ ಬೆಳಗ್ಗೆ 6 ರಿಂದ 10 ಗಂಟೆಗಳಲ್ಲಿ 50 ಮಿಮೀ ವರೆಗೆ ಮಳೆಯಾಗಿದೆ.

ಇನ್ನು ಈ ಅಕಾಲಿಕ ಮಳೆ ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಚಂಡಮಾರುತ ಉಂಟಾದ ಪರಿಣಾಮದಿಂದ ಇದಕ್ಕೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ಥಳೀಯ ಆಡಳಿತವು ಪರಿಹಾರ ಕಾರ್ಯದಲ್ಲಿ ತೊಡಗಿದೆ ಎಂದು ಹೇಳಿದರು. “ಗುಜರಾತ್‌ನ ವಿವಿಧ ನಗರಗಳಲ್ಲಿ ಪ್ರತಿಕೂಲ ಹವಾಮಾನ ಮತ್ತು ಸಿಡಿಲುಗಳಿಂದಾಗಿ ಅನೇಕ ಜನರು ಸಾವನ್ನಪ್ಪಿದ ಸುದ್ದಿಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟಕ್ಕೆ ನಾನು ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಸ್ಥಳೀಯ ಆಡಳಿತ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

Share Information