DAKSHINA KANNADA
ಕಡಬ: ಹಾಡಹಗಲೇ ನಾಡಿಗೆ ಬಂದ ಕಾಡಾನೆ!
ಕಡಬ, ಡಿಸೆಂಬರ್ 16: ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಒಂಟಿ ಕಾಡಾನೆಯೊಂದು ಬಂದು ಜನರಲ್ಲಿ ಭೀತಿ ಮೂಡಿಸಿದ ಘಟನೆ ನಡೆದಿದೆ.
ಅಡ್ಡಹೊಳೆಯ ಪೆಟ್ರೋಲ್ ಪಂಪಿನ ಬಳಿ ಕಾಡಿನಿಂದ ಹೆದ್ದಾರಿಗೆ ಬಂದ ಗಂಡಾನೆ ಹೆದ್ದಾರಿಯನ್ನು ದಾಟಲೆತ್ನಿಸಿದಾಗ ಹೆದ್ದಾರಿ ಅಗಲೀಕರಣ ಕಾರಣಕ್ಕೆ ಅಗೆಯಲ್ಪಟ್ಟ ಮಣ್ಣಿನಲ್ಲಿ ಹೂತು ಹೋಗಿ ಸಂಕಷ್ಟಕ್ಕೀಡಾಯಿತು. ಬಳಿಕ ಮೇಲೆದ್ದು ಸಾಗಿದ ಈ ಆನೆಯು ಅಯ್ಯಪ್ಪ ದೇವಾಲಯದ ಬಳಿಯಿಂದ ಪೇರಮಜಲು ರಸ್ತೆಯಲ್ಲಿ ಜನವಸತಿ ಪ್ರದೇಶದಿಂದ ಸಾಗಿ ಕಾಡು ಸೇರಿಕೊಂಡಿದೆ.
ಆನೆಯು ಸಾಗುವ ಪಥದಲ್ಲಿ ಜನರೇನಾದರೂ ಆನೆಯ ಆಕ್ರಮಣಕ್ಕೆ ತುತ್ತಾಗುವ ಭೀತಿಯಿಂದ ಗ್ರಾಮಸ್ಥರು ಬೊಬ್ಬೆ ಹೊಡೆದು ಆನೆಯ ಹಿಂದೆಯೇ ಓಡೋಡಿಕೊಂಡು ನಿವಾಸಿಗರನ್ನು ಎಚ್ಚರಿಸುತ್ತಿದ್ದರು. ರಾತ್ರಿ ವೇಳೆ ಈ ಪ್ರದೇಶದಲ್ಲಿ ಗೋಚರಿಸುವ ಕಾಡಾನೆಗಳು ಹಾಡಹಗಲೇ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನತೆ ಭಯಭೀತರಾದರು. ಆದರೆ ಕಾಣಿಸಿಕೊಂಡ ಆನೆಯು ಜನರಿಗಾಗಲಿ ಕೃಷಿ ಬೆಳೆಗಾಗಲಿ ಯಾವುದೇ ಹಾನಿ ಮಾಡದೇ ಜನರ ಬೊಬ್ಬೆಯ ನಡುವೆ ಕಾಡು ಸೇರಿಕೊಂಡಿತು.
You must be logged in to post a comment Login