LATEST NEWS
ಅನಾರೋಗ್ಯ ಪೀಡಿತ ಇಸ್ರೇಲ್ ವೃದ್ದ ದಂಪತಿಯನ್ನು ಹಮಾಸ್ ಉಗ್ರರಿಂದ ರಕ್ಷಿಸಿದ ‘ಇಂಡಿಯನ್ ಸೂಪರ್ ವುಮನ್’.!
ನವದೆಹಲಿ: ಇಸ್ರೇಲ್ ಗಾಜಾ ಗಡಿ ಭಾಗದಲ್ಲಿ ಹಮಾಸ್ ಉಗ್ರರ ಹಠತ್ ದಾಳಿಯಿಂದ ಎಲ್ಲರೂ ಜೀವಭಯದಿಂದ ಓಡಿದರೆ ಮತ್ತೆ ಕೆಲವರು ಉಗ್ರರ ಗುಂಡಿಗೆ ಬಲಿಯಾದರು. ಆದ್ರೆ ಕೇರಳ ಮೂಲದ ಇಬ್ಬರು ದಾದಿಯರು ಅನಾರೋಗ್ಯ ಪೀಡಿತ ದಂಪತಿಯ ಜೀವವವನ್ನು ತಮ್ಮ ಜೀವ ಒತ್ತೆ ಇಟ್ಟು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ.
ಅ.07 ರಂದು ಇಸ್ರೇಲಿಗಳ ಹಬ್ಬದ ಸಂದರ್ಭದಲ್ಲಿ ನಡೆದ ದಾಳಿಯ ವೇಳೆ ಕೇರಳದ ವೀರ ವನಿತೆಯರು ಹಮಾಸ್ ಉಗ್ರರಿಂದ ವೃದ್ಧ ದಂಪತಿಯ ಜೀವ ಉಳಿಸಿ ಮಾನವಿಯತೆ ಮೆರೆದಿದ್ದಾರೆ.
ಭಾರತದಲ್ಲಿರುವ ಇಸ್ರೇಲ್ ನ ರಾಯಭಾರ ಕಚೇರಿ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇಬ್ಬರು ಕೇರಳಿಗರಾದ ಸಬಿತಾ, ಮೀರಾ ಮೋಹನನ್ ಅವರನ್ನು ಭಾರತದ ಸೂಪರ್ ವುಮೆನ್ ಎಂದು ಬಣ್ಣಿಸಿ ಧನ್ಯವಾದ ತಿಳಿಸಿದೆ.
ಇಸ್ರೆಲ್ ನ ರಾಯಭಾರ ಕಚೇರಿ ಘಟನೆ ಬಗ್ಗೆ ಸಬೀತಾ ಅವರ ಮಾತುಗಳಿರುವ ವೀಡಿಯೋವನ್ನು ಹಂಚಿಕೊಂಡಿದೆ.
ತಮ್ಮೆಡೆಗೆ ಗುಂಡಿನ ದಾಳಿ ನಡೆಯುತ್ತಿದ್ದರೂ ಈ ಇಬ್ಬರೂ ಮಹಿಳೆಯರು ತಾವಿದ್ದ ಮನೆಯ ಸುರಕ್ಷಾ ಕೊಠಡಿಯ ಬಾಗಿಲ ಹಿಡಿಯನ್ನು ಭದ್ರವಾಗಿ ಹಿಡಿದು ಹಮಾಸ್ ಉಗ್ರರು ಒಳಗೆ ಪ್ರವೇಶಿಸದಂತೆ ತಡೆದಿದ್ದಾರೆ.
ತಾವು ಕಾಳಜಿ ವಹಿಸುತ್ತಿದ್ದ ವೃದ್ಧ ದಂಪತಿಗಳ ಪೈಕಿ ಮಹಿಳೆಗೆ ಅಮಿಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ಎಎಲ್ಎಸ್) ಎಂಬ ಆರೋಗ್ಯ ಸಮಸ್ಯೆ ಇತ್ತು ಎಂದು ಸಬಿತಾ ತಿಳಿಸಿದ್ದಾರೆ. ಬೆಳಿಗ್ಗೆ 6:30 ರ ವೇಳೆಗೆ ಸೈರನ್ ಮೊಳಗಿದ್ದನ್ನು ಕೇಳಿದ ಸಬಿತಾ ಸುರಕ್ಷಾ ಕೊಠಡಿಗೆ ತೆರಳಿದ್ದಾರೆ.
ಈ ಬಳಿಕ ವೃದ್ಧ ದಂಪತಿಯ ಮಗಳು ಕರೆ ಮಾಡಿ ಆ ಪ್ರದೇಶದಲ್ಲಿ (ಗಾಜಾ ಪಟ್ಟಿ ಗಡಿ) ಯಲ್ಲಿನ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ತಿಳಿಸಿ, ಮನೆಯ ಎಲ್ಲಾ ಬಾಗಿಲನ್ನು ಲಾಕ್ ಮಾಡಲು ಸೂಚಿಸಿದ್ದಾರೆ. “ಇದಾದ ಕೆಲವೇ ನಿಮಿಷಗಳಲ್ಲಿ ಭಯೋತ್ಪಾದಕರು ಮನೆಗೆ ನುಗ್ಗಿ ಗುಂಡು ಹಾರಿಸಿ ಗಾಜು ಒಡೆಯುವ ಶಬ್ದ ಕೇಳಿದೆ.
ಈ ಹಂತದಲ್ಲಿ ಸಬಿತಾ ಪುನಃ ವೃದ್ಧ ದಂಪತಿಯ ಮಗಳಿಗೆ ಕರೆ ಮಾಡಿ ಏನು ಮಾಡಬೇಕೆಂದು ಕೇಳಿದ್ದಾರೆ. “ಸುರಕ್ಷಾ ಕೊಠಡಿಯ ಬಾಗಿಲ ಹ್ಯಾಂಡಲ್ ನ್ನು ಭದ್ರವಾಗಿ ಹಿಡಿದುಕೊಂಡು ಒಳಗೆ ಯಾರೂ ಬರದಂತೆ ತಡೆಯಲು ಸೂಚಿಸಿದ್ದಾರೆ. ಅಂತಯೇ ಗುಂಡಿನ ದಾಳಿಗಳ ನಡುವೆಯೂ ಧೃತಿಗೆಡದ ಮಹಿಳೆಯರು ವೃದ್ಧ ದಂಪತಿಯನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ. ಈ ಇಬ್ಬರೂ ಕಳೆದ 3 ವರ್ಷಗಳಿಂದ ಇಸ್ರೇಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
You must be logged in to post a comment Login