DAKSHINA KANNADA
‘ಚುನಾವಣೆ ಸಂದರ್ಭ ಹಿಂದೂ ಸಂಘಟನೆಯ ಮುಖಂಡರಿಂದ ಜಿಲ್ಲೆಯಲ್ಲಿ ಶಾಂತಿ ಕದಡುವ ಕಾರ್ಯ ಬೇಡ’ : ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ
ಸುರತ್ಕಲ್ : ಚುನಾವಣೆ ಸಂದರ್ಭ ಜಿಲ್ಲೆಯಲ್ಲಿ ಹಿಂದೂ ಸಂಘಟನೆಯ ಮುಖಂಡರಿಂದ ಶಾಂತಿ ಕದಡುವ ಕಾರ್ಯ ಬೇಡ ಎಂದು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಮನವಿ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ಕಾಂಗ್ರೆಸ್ನಿಂದ ಹಿಂದೂ ಕಾರ್ಯಕರ್ತರ ದಮನ ನೀತಿ ಎಂಬ ಹೇಳಿಕೆ ಗಂಭೀರವಾಗಿದ್ದು, ಹಿಂದೂ ಸಂಘಟನೆಯ ಮುಖಂಡರು ಚುನಾವಣೆಯ ಸಂದರ್ಭ ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ. ಇದು ದ.ಕ ಜಿಲ್ಲೆಯ ಶಾಂತಿ ಸೌಹಾರ್ದತೆಗೆ ಅಡ್ಡಿ ಮಾಡುವ ಹೇಳಿಕೆ ಎಂದು ಹೇಳಿದರು.
ಸರ್ವ ಜನಾಂಗದ ಶಾಂತಿಯ ದೋಟ ಎಂಬಂತೆ ನಮ್ಮ ದೇಶವಿದೆ. ಎಲ್ಲಾ ಜಾತಿಯ ಜನ ಇಲ್ಲಿ ನೆಲೆ ಕಂಡಿದ್ದಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಒಪ್ಪಿಗೆ ನೀಡಿದವರೇ ರಾಜೀವ್ ಗಾಂದಿ, ಮಂದಿರಕ್ಕೆ ದೇಣಿಗೆ ನೀಡಿದವರಲ್ಲಿ ನಾನೂ ಸೇರಿದಂತೆ ಅನೇಕ ಕಾಂಗ್ರೆಸ್ಸಿಗರು ನೀಡಿದ್ದಾರೆ.ಇತರ ಧರ್ಮದವರನ್ನೂ ಸಮಾನವಾಗಿ ಕಾಣುವ ಪಕ್ಷ ಕಾಂಗ್ರೆಸ್.
ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ನ ಪ್ರಮುಖರಾದ ಯು.ಶ್ರೀನಿವಾಸ ಮಲ್ಯ, ಟಿ ಎಂ ಎ ಪೈ, ಕಾರ್ನಾಡ್ ಸದಾಶಿವ ರಾವ್, ಜನಾರ್ದನ ಪೂಜಾರಿ, ಸಹಿತ ಕಾಂಗ್ರೆಸ್ ನಾಯಕರು ಸೌಹಾರ್ದತಯುತ ವಾತಾವರಣದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಿದವರು. ದಿ. ಆಸ್ಕರ್ ಫೆರ್ನಾಂಡಿಸ್ ಹಿಂದೂ ಸಮುದಾಯದೊಂದಿಗೆ ಬೆರೆತು ಬಾಳಿದವರು. ಯು.ಟಿ ಖಾದರ್ ಅವರು ಹಿಂದೂ ಸಮುದಾಯದ ಪ್ರತೀ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಇದೀಗ ಚುನಾವಣೆ ಬಂದಾಗ ಕಾಂಗ್ರೆಸ್ ವಿರುದ್ದ ಕೆಲವು ಸಂಘಟನೆಗಳು ಬಾಯಿ ಮಾತಿನ ಹೇಳಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಕೂಡಿ ಬಾಳುವ ಶಾಂತಿಯುತ ವಾತಾವರಣವನ್ನು ಕದಡುವ ಯತ್ನ ಮಾಡಬಾರದು. ಯಾವುದೇ ಸಮುದಾಯದ ಸಂಘಟನೆಗಳು ಜಾತಿ,ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳದೆ ,ಶಾಂತಿಯುತ ಜೀವನಕ್ಕೆ ಕೈ ಜೋಡಿಸಿದರೆ ಅಂತಹ ಸಂಘಟನೆಗಳನ್ನು ನಿಷೇಧಿಸಲುಮುಂದಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದ್ದಾರೆ.
You must be logged in to post a comment Login