KARNATAKA
ನೇತ್ರಾಣಿ ಸಮೀಪದ ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಿಸಿದ ಕೋಸ್ಟ್ ಗಾರ್ಡ್
ಭಟ್ಕಳ ಸೆಪ್ಟೆಂಬರ್ 11: ಕಾರವಾರ ನೇತ್ರಾಣಿ ಸಮೀಪದ ಅರಬ್ಬಿ ಸಮುದ್ರದಲ್ಲಿ ತಾಂತ್ರಿಕ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಪರ್ಶಿಯನ್ ಬೋಟ್ ನಲ್ಲಿದ್ದ ಎಲ್ಲಾ 24 ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ.
ಭಟ್ಕಳದ ಖಮ್ರುಲ್ಲಾ ಬಾಹರ್ ಹೆಸರಿನ ಪರ್ಶಿಯನ್ ಬೋಟ್ ಹೊನ್ನಾವರ ಬಂದರು ಮೂಲಕ ಮೀನುಗಾರಿಕೆಗೆ ತೆರಳಿತ್ತು. ಗುರುವಾರ ಮಧ್ಯಾಹ್ನ 2 ಗಂಟೆಗೆ ಪರ್ಶಿಯನ್ ಬೋಟ್ ನ ಎಂಜಿನ್ ಸಮಸ್ಯೆ ಕಾಣಿಸಿಕೊಂಡಿದ್ದು, ಬೋಟ್ ಸಮುದ್ರದಲ್ಲಿ ಕೆಟ್ಟು ನಿಂತಿತ್ತು, ಈ ಬೋಟ್ ನಲ್ಲಿ ಒಟ್ಟು 24 ಮಂದಿ ಮೀನುಗಾರರಿದ್ದರು.
ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ ಅಪಾಯಕ್ಕೆ ಸಿಲುಕಿದ ಮೀನುಗಾರರು ರಕ್ಷಣೆಗಾಗಿ ಸಂಬಂಧಪಟ್ಟ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಪೊಲೀಸರ ಸಹಾಯ ಯಾಚಿಸಿದ್ದರು.
ನಿನ್ನೆ ಸಂಜೆ ಮಂಗಳೂರಿನ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ನೌಕೆಯೊಂದಿಗೆ ಸ್ಥಳಕ್ಕೆ ತೆರಳಿದರಾದರೂ ಹವಮಾನ ವೈಪರೀತ್ಯದಿಂದಾಗಿ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ರೋಪ್ ಮೂಲಕ ಯಾಂತ್ರಿಕ ದೋಣಿಯ ಸಮೀಪ ಸಾಗಿ ಎಲ್ಲಾ ಮೀನುಗಾರರನ್ನ ರಕ್ಷಿಸಿದ್ದಾರೆ. ಕಾರವಾರ ಬಂದರಿಗೆ ಕರೆದುಕೊಂಡು ಬರಲಾಗಿದೆ.
You must be logged in to post a comment Login