LATEST NEWS
ಅವ್ಯವಸ್ಥೆಯ ಆಗರವಾಗಿದ್ದ ನಗರವನ್ನು ಮರಳಿ ಹಳಿಗೆ ತರುವ ಪ್ರಯತ್ನ: ಫೀಳ್ಡಿಗಿಳಿದ ಮಂಗಳೂರು ಪೊಲೀಸರು..!
ಮಂಗಳೂರು: ಅವ್ಯವಸ್ಥೆಯ ಆಗರವಾಗಿದ್ದ ಮಂಗಳೂರು ನಗರವನ್ನು ಮರಳಿ ಹಳಿಗೆ ತರುವ ಪ್ರಯತ್ನಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದು, ಆಯುಕ್ತರ ಸೂಚನೆ ಮೇರೆಗೆ ಮಂಗಳೂರು ನಗರ ಪೊಲೀಸರು ಫೀಳ್ಡಿಗಿಳಿದು ಕಾರ್ಯಾಚರಣೆ ಆರಂಭಿಸಿದ್ದಾರೆ.
ನಗರದಲ್ಲಿ ಅತಿಕ್ರಮಿಸಿದ ಫುಟ್ ಪಾತ್ಗಳ ತೆರವು, ವಾಹನಗಳ ಟಿಂಟ್, ಅನಧಿಕೃತ ಪಾರ್ಕಿಂಗ್, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ನಗರ ಪೊಲೀಸರು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಪುಟ್ ಪಾತ್ ಹಾಗೂ ಲೇಡಿಹಿಲ್ ಜಂಕ್ಷನ್ ನ ಫುಟ್ ಪಾತ್ ಗಳಲ್ಲಿ ವ್ಯಾಪಾರಸ್ಥರು ಇಟ್ಟಿರುವ ಸಾಮಗ್ರಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗಿದೆ. ಉಳಿದ ಫುಟ್ ಪಾತ್ಗಳಲ್ಲೂ ಇದೇ ಮಾದರಿಯ ಕಾರ್ಯಾಚರಣೆ ಮುಂದುವರೆದಿದೆ.
ಕೋವಿಡ್ ಸಂದರ್ಭ ಸ್ಥಗಿತಗೊಳಿಸಲಾಗಿದ್ದ ಡ್ರಂಕ್ ಅಂಡ್ ಡ್ರೈವ್ ವಿಶೇಷ ಅಭಿಯಾನ 2 ವರ್ಷಗಳ ಬಳಿಕ ಮತ್ತೆ ಪೊಲೀಸರು ಆರಂಭಿಸಿದ್ದು ಮದ್ಯಮಾನ ಮಾಡಿದವರನ್ನು ಪತ್ತೆ ಹಚ್ಚಿ ನೋಟಿಸ್ ಜಾರಿ ನ್ಯಾಯಾಲಯದಲ್ಲಿ ದಂಡ ಕಟ್ಟಲು ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಹನಗಳಲ್ಲಿ ಟಿಂಟ್ ಗ್ಲಾಸ್ ಹಾವಳಿ ಹೆಚ್ಚಾಗಿದ್ದು ಇದರ ವಿರುದ್ದವೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ.
ಅದೇ ರೀತಿ ಮಂಗಳೂರು ನಗರದ ಸಂಚಾರ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ರಸ್ತೆಯ ಎಲ್ಲೆಂದರಲ್ಲಿ ಅನಧಿಕೃತ ನಿಲುಗಡೆ ಮಾಡಿ ಸಾರ್ವಜನಿಕರಿಗೆ ಕಿರಿ ಉಂಟು ಮಾಡುತ್ತಿದ್ದ ವಾಹನಗಳಿಗೆ ವೀಲ್ ಲಾಕ್ ಮಾಡಿ ಕ್ರಮ ಕೈಗೊಂಡು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು ಈ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
You must be logged in to post a comment Login