Connect with us

    KARNATAKA

    ಚಿಕ್ಕಮಗಳೂರು: ನೀರಲ್ಲಿ ಕೊಚ್ಚಿ ಹೋದ 1ನೇ ತರಗತಿ ಬಾಲಕಿ

    ಚಿಕ್ಕಮಗಳೂರು, ಜುಲೈ 05: ಕಾಲು ತೊಳೆದುಕೊಳ್ಳಲು ಹಳ್ಳಕ್ಕೆ ಇಳಿದಿದ್ದ 1ನೇ ತರಗತಿಯ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ. ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯನ್ನು ಸುಪ್ರಿತಾ(6) ಎಂದು ಗುರುತಿಸಲಾಗಿದೆ.

    ಸುಪ್ರಿತಾ ತನ್ನ ಅಣ್ಣನ ಜೊತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಕಾಲು ಕೆಸರಾಯಿತು ಎಂದು ಅಣ್ಣ-ತಂಗಿ ಇಬ್ಬರೂ ಹಳ್ಳದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿದ್ದರು. ಆ ವೇಳೆ ಸುಪ್ರಿತಾ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ. ಕಳೆದೊಂದು ವಾರದಿಂದ ಆರೋಗ್ಯ ಸರಿ ಇಲ್ಲ ಎಂದು ಶಾಲೆಗೆ ಹೋಗಿರದ ಬಾಲಕಿ ಸೋಮವಾರ ಶಾಲೆಗೆ ಹೋಗಿದ್ದಳು. ಆದರೆ, ಸಂಜೆ ಮನೆಗೆ ಬರುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

    ವಿಷಯ ತಿಳಿದ ಕೂಡಲೇ ಸ್ಥಳೀಯರು ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಾಲಕಿ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದರು. ಸ್ಥಳೀಯರು ಜೊತೆ ಅಧಿಕಾರಿಗಳು ಕೂಡ ನೀರಿನಲ್ಲಿ ಧುಮುಕಿ ಹರಿಯುವ ಹಳ್ಳದಲ್ಲಿ ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಆದರೂ ಬಾಲಕಿ ಪತ್ತೆಯಾಗಲಿಲ್ಲ.

    ಗುಡ್ಡಗಾಡು ಪ್ರದೇಶದಲ್ಲಿ ಹರಿಯುವ ನೀರಾಗಿರುವುದರಿಂದ ತಗ್ಗು-ದಿಬ್ಬ ಇರುವುದರಿಂದ ಬೋಟ್ ಹಾಕಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾಲಕಿಯನ್ನು ಹುಡುಕಾಡಿದರು. ಆದರೆ, ಮಳೆ ಹಾಗೂ ಕತ್ತಲು ಹೆಚ್ಚಾದ ಕಾರಣ ಅಧಿಕಾರಿಗಳು ಹಾಗೂ ಸ್ಥಳೀಯರು ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಕೈಬಿಟ್ಟಿದ್ದಾರೆ.

    ಸಿಬ್ಬಂದಿ ಮಂಗಳವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರೆಸಲಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ಡಿಎಫ್‌ಒ ಶಶಿಧರ್, ಚಿಕ್ಕಮಗಳೂರು ತಹಶೀಲ್ದಾರ್ ಕೂಡ ಮೊಕ್ಕಾಂ ಹೂಡಿದ್ದಾರೆ. ಬಾಲಕಿ ನಾಪತ್ತೆಯಾಗಿದ್ದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಾಲೆ ಹಾಗೂ ಗ್ರಾಮದಲ್ಲೂ ನೀರವ ಮೌನ ಆವರಿಸಿದೆ. ವಿಷಯ ತಿಳಿದು ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸ್ಥಳಕ್ಕೆ ಬಂದು ಬಾಲಕಿಯನ್ನು ಹುಡುಕಾಡುವ ಪ್ರಯತ್ನ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply