Connect with us

    FILM

    ಸುಶಾಂತ್ ಸಾವಿನ ತನಿಖೆ, ಬಿಹಾರ ಪೋಲೀಸರನ್ನು ಕೈದಿಗಳಂತೆ ನಡೆಸಿಕೊಂಡ ಮುಂಬೈ ಪೋಲೀಸ್..

    ಮುಂಬೈ, ಅಗಸ್ಟ್ 01: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವು ನಟನ ಅಭಿಮಾನಿಗಳ ಆಘಾತಕ್ಕೆ ಕಾರಣವಾಗಿತ್ತು. ಜುಲೈ 14 ರಂದು ಮುಂಬೈಯ ತನ್ನ ಪ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಸುಶಾಂತ್ ಮೃತದೇಹ ಪತ್ತೆಯಾಗಿತ್ತು. ಮುಂಬೈ ಪೋಲೀಸ್ ಈ ಸಂಬಂಧ ಪ್ರಕರಣವನ್ನೂ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

    ಈ ನಡುವೆ ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್ ಮುಖ ತನಿಖೆ ಅಂತಿಮ ಹಂತಕ್ಕೆ ತಲುಪುವ ಮೊದಲೇ ಇದೊಂದು ಆತ್ಮಹತ್ಯೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನೂ ನೀಡಿದ್ದರು. ಸುಶಾಂತ್ ಸಾವಿನ ಹಿನ್ನಲೆಯಲ್ಲಿ ಹಲವಾರು ಸಂಶಯಗಳು ಮೂಡಿ ಬಂದ ಹಿನ್ನಲೆಯಲ್ಲಿ ಸುಶಾಂತ್ ಕುಟುಂಬ ಇದೀಗ ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕೆಂದು ಒತ್ತಾಯಿಸಿದೆ. ಈ ಸಂಬಂಧ ಸುಶಾಂತ್ ತಂದೆ ಬಿಹಾರದ ಪಾಟ್ನಾದಲ್ಲಿ ಸುಶಾಂತ್ ಸ್ನೇಹಿತೆ ರಿಯಾ ಚಾಟರ್ಜಿ ವಿರುದ್ಧ ಪೋಲೀಸ್ ದೂರು ದಾಖಲಿಸಿದ್ದರು. ದೂರಿನ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ಬಿಹಾರ ಪೋಲೀಸರು ಸುಶಾಂತ್ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಸುತ್ತಿದ್ದಾರೆ.

    ಆದರೆ ಮಹಾರಾಷ್ಟ್ರ ಸರಕಾರ ಬಿಹಾರ ಪೋಲೀಸರನ್ನು ನಡೆದುಕೊಂಡ ರೀತಿ ಮಾತ್ರ ಎಲ್ಲರ ಆಕ್ರೋಶಕ್ಕೂ ಕಾರಣವಾಗಿದೆ. ಸುಶಾಂತ್ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮುಂಬೈಗೆ ಆಗಮಿಸಿದ್ದ ಬಿಹಾರ ಪೋಲೀಸರಿಗೆ ಮಹಾರಾಷ್ಟ್ರ ಪೋಲೀಸರು ಸಹಕಾರ ನೀಡಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಪೋಲೀಸರಿಗೆ ದೂರಿನ ಸಂಬಂಧ ವಿಚಾರಣೆ ನಡೆಸಲು ಹಾಗೂ ಮುಂಬೈನ ವಿವಿಧ ಕಡೆಗಳಿಗೆ ತೆರಳಲು ಬೇಕಾದ ವಾಹನದ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ. ಇದರಿಂದಾಗಿ ಬಿಹಾರ ಪೋಲೀಸರು ಟ್ಯಾಕ್ಸಿ ಹಾಗೂ ಆಟೋಗಳಲ್ಲಿ ಕುಳಿತು ವಿಚಾರಣೆಗೆ ತೆರಳಬೇಕಾದ ಅಸಹಾಯಕ ಸ್ಥಿತಿ ನಿರ್ಮಾಣಗೊಂಡಿದೆ.

    ಒಂದು ಹಂತದಲ್ಲಿ ಮುಂಬೈ ಪೋಲೀಸರು ಸುಶಾಂತ್ ಸಾವಿನ ಹಿನ್ನಲೆಯಲ್ಲಿ ತನಿಖೆಗೆ ಆಗಮಿಸಿದ್ದ ಪೋಲೀಸರನ್ನು ಕೈದಿಗಳ ರೂಪದಲ್ಲಿ ನಡೆಸಿಕೊಂಡಿದ್ದಾರೆ. ಬಿಹಾರ ಪೋಲೀಸರನ್ನು ಕೈದಿಗಳನ್ನು ಪೋಲೀಸ್ ವಾಹನದಲ್ಲಿ ತುರುಕುವಂತೆ ಹೀನಾಯವಾಗಿ ವರ್ತಿಸಿದ್ದರು. ಈ ಹಿನ್ನಲೆಯಲ್ಲಿ ಬಿಹಾರ ಪೋಲೀಸರು ಇದೀಗ ಮಹಾರಾಷ್ಟ್ರ ಪೋಲೀಸರ ವಿರುದ್ಧ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದಾರೆ. ಬಿಹಾರ ಪೋಲೀಸ್ ಮಹಾನಿರ್ದೇಶಕ ಗುಪ್ತೇಶ್ವರ್ ಪಾಂಡೆ ತಮ್ಮ ಅಸಮಾಧಾನವನ್ನು ಮಾಧ್ಯಮಗಳ ಮುಂದೆ ತೋರಿಕೊಂಡಿದ್ದಾರೆ. ಸುಶಾಂತ್ ಸಾವಿನ ಹಿಂದಿರುವ ಸತ್ಯಗಳು ಇದೀಗ ಒಂದೊಂದೇ ಹೊರಬರುತ್ತಿದ್ದು, ಇದೊಂದು ಆತ್ಮಹತ್ಯೆಯಲ್ಲ ಎನ್ನುವುದಕ್ಕೆ ಪೂರಕವಾದ ಅಂಶಗಳನ್ನು ಇದು ಬಹಿರಂಗಪಡಿಸುತ್ತಿವೆ.

    Share Information
    Advertisement
    Click to comment

    You must be logged in to post a comment Login

    Leave a Reply