ಸುಳ್ಯ, ಸೆಪ್ಟಂಬರ್ 01:ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವರ ಉತ್ಸವ ಮೂರ್ತಿ ಜೊತೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕದ್ದೊಯ್ದ ಘಟನೆ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಮರಕಟ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದಿದೆ. ನಿನ್ನೆ ರಾತ್ರಿ ಕಳ್ಳರು ದೇವಸ್ಥಾನದೊಳಗೆ ನುಗ್ಗಿರುವ ಸಾಧ್ಯತೆಯಿದ್ದು, ದೇವರ ವಿಗ್ರಹದಲ್ಲಿದ್ದ ಆಭರಣಗಳು, ಕಾಣಿಕೆ ಹುಂಡಿ, ದೇವರ ಉತ್ಸವ ಮೂರ್ತಿ ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿರುವ ಉತ್ಸವ ಮೂರ್ತಿಯು ಸುಮಾರು 1600 ವರ್ಷಗಳ ಹಳೆಯ ಮೂರ್ತಿಯಾಗಿದೆ ಎನ್ನಲಾಗುತ್ತಿದ್ದು, ಪುರಾತನ ಕಾಲದ ಮೂರ್ತಿಯಾಗಿರುವುದರಿಂದ ಬೆಲೆಕಟ್ಟಲಾಗದಂತಹ ಸೊತ್ತು ಇದೀಗ ಕಳ್ಳರ ಕೈ ಸೇರಿದೆ.
ಇಂದು ಮುಂಜಾನೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸಲು ಬಂದ ಸಿಬ್ಬಂದಿಗಳಿಂದ ಈ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಸುಬ್ರಮಣ್ಯ ಪೋಲೀಸರಿಗೆ ಮಾಹಿತಿ ನೀಡಲಾಗಿದೆ. ದೇವಸ್ಥಾನದಲ್ಲಿ ಸಿ.ಸಿ.ಕ್ಯಾಮಾರಾ ಹಾಕಲಾಗಿದ್ದು, ಕಳ್ಳರು ಸಿ.ಸಿ.ಕ್ಯಾಮಾರಾವನ್ನು ಮೊದಲು ಪುಡಿಗೈದು ಬಳಿಕ ತಮ್ಮ ಕಳ್ಳತನದ ವೃತ್ತಿಗೆ ಇಳಿದಿದ್ದಾರೆ.