KARNATAKA
ಗಾಂಧೀಜಿಯನ್ನೇ ಹೊಡೆದು ಹಾಕಿದವರು ನನ್ನನ್ನು ಬಿಡ್ತಾರಾ?: ಸಿದ್ದರಾಮಯ್ಯ
ಚಿಕ್ಕಮಗಳೂರು, ಆಗಸ್ಟ್ 20: ‘ಗಾಂಧೀಜಿ ಅವರನ್ನೇ ಹೊಡೆದು ಹಾಕಿದವರು ನನ್ನನ್ನು ಬಿಡ್ತಾರಾ? ನಾನು ಸತ್ಯವನ್ನು ಹೇಳುತ್ತೇನೆ. ಹೀಗಾಗಿ, ಬಿಜೆಪಿ, ಆರ್ಎಸ್ಎಸ್ನವರಿಗೆ ನನ್ನ ಮೇಲೆ ಕೋಪ, ನನ್ನನ್ನು ಕಂಡರೆ ಆಗಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.
ಮಳೆ ಹಾನಿ ವೀಕ್ಷಣೆಗೆ ಜಿಲ್ಲೆಗೆ ಬಂದಿದ್ದ ಅವರು ತಾಲ್ಲೂಕಿನ ಬಾಸಾಪುರದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.‘ಗಾಂಧೀಜಿ ಅವರನ್ನು ಕೊಂದಿದ್ದು ನಾಥೂರಾಮ್ ಗೋಡ್ಸೆ. ಆತನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುತ್ತಾರೆ ಎಂಬುದು ಬೇಸರದ ಸಂಗತಿ’ ಎಂದರು.
ವಿ.ಡಿ.ಸಾವರ್ಕರ್ ಜೈಲಿಗೆ ಹೋಗಿದ್ದು ನಿಜ. ಅವರು ಕ್ಷಮಾಪಣೆ ಪತ್ರ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಜೆಪಿಯವರು ಅವರನ್ನು ವೀರ ಸಾವರ್ಕರ್ ಎಂದು ಹೇಳುತ್ತಾರೆ. ಸಾವರ್ಕರ್ ಬಗ್ಗೆ ನನಗೆ ಕೋಪ ಇಲ್ಲ. ಅವರು ನಡೆದುಕೊಂಡಿದ್ದ ರೀತಿ ಸರಿ ಇಲ್ಲ ಎಂದು ಹೇಳಿದ್ದೇನೆ ಅಷ್ಟೆ ಎಂದು ಸಮಜಾಯಿಷಿ ನೀಡಿದರು.
‘ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬಿಜೆಪಿಯವರು ‘ಹರ್ ಘರ್ ತಿರಂಗಾ’ ಅಭಿಯಾನ ಮಾಡಿದ್ದಾರೆ. ಈ ರಾಷ್ಟ್ರಧ್ವಜವು ನಮ್ಮ ದೇಶಕ್ಕೆ ಯೋಗ್ಯವಲ್ಲ ಎಂದು ಸಾವರ್ಕರ್, ಗೋಳವಲ್ಕರ್ ಹೇಳಿದ್ದರು. ಬಿಜೆಪಿಯವರು ‘ಈಗ ಹರ್ ಘರ್ ತಿರಂಗಾ’ ಎಂದು ನಾಟಕವಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
You must be logged in to post a comment Login