DAKSHINA KANNADA
ಶ್ರೀ ಕ್ಷೇತ್ರ ಕಟೀಲಿನಲ್ಲಿ ‘ತೂಟೆದಾರ’ ಸೇವೆ: ಎರಡು ಗ್ರಾಮಗಳ ನಡುವೆ ರೋಮಾಂಚಕ ಬೆಂಕಿಯಾಟ!

ಮಂಗಳೂರು, ಏಪ್ರಿಲ್ 22: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಆಯೋಜಿಸುವ ತೂಟೆದಾರ ಸೇವೆ ನಡೆಯಿತು. ದೇವಾಲಯದಲ್ಲಿ ನಡೆಯುವ ಉತ್ಸವದ ಮುಖ್ಯ ಆಕರ್ಷಣೆಯೇ ಈ ತೂಟೆದಾರ ಸೇವೆ.
ಎರಡು ಮಾಗಣೆಗೆ ಸೇರಿದ ಅತ್ತೂರು ಮತ್ತು ಕೊಡತ್ತೂರು ಗ್ರಾಮಗಳ ಜನರ ನಡುವೆ ನಡೆಯುವ ಬೆಂಕಿಯ ಆಟವಾದ ತೂಟೆದಾರ ಸೇವೆ ಸಾವಿರಾರು ಜನರನ್ನು ಅಚ್ಚರಿಗೊಳಿಸುತ್ತದೆ. ಕಟೀಲು ದೇಗುಲದಲ್ಲಿ ಕಳೆದ ನೂರಾರು ವರ್ಷಗಳಿಂದ ಬೆಂಕಿಯ ಆಟ ನಡೆದುಕೊಂಡು ಬರುತ್ತಿದೆ. ಹೀಗಿದ್ದರೂ ಇದುವರೆಗೂ ಯಾವುದೇ ಬೆಂಕಿ ಅನಾಹುತ, ಭಕ್ತಾಧಿಗಳು ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರ ಪುಣ್ಯಸ್ಥಳವೆಂದೇ ಪ್ರಸಿದ್ಧಿಯಾಗಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣಕಾಲದಿಂದಲೂ ಮಹತ್ವ ಹೊಂದಿದೆ. ಪ್ರತಿ ವರ್ಷ ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಜಾತ್ರಾ ಮಹೋತ್ಸವದ ನಿಮಿತ್ತ ಅದ್ಧೂರಿ ರಥೋತ್ಸವದಲ್ಲಿ ಭಾಗಿಯಾಗಲು ಬೇರೆ ಬೇರೆ ಊರುಗಳಿಂದಲೂ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಮುಂಜಾನೆ ಅಜಾರು ನಂದಿನಿ ನದಿಯಲ್ಲಿ ಜಳಕದ ಉತ್ಸವದ ಬಳಿಕ ರಕ್ತೇಶ್ವರೀ ಗುಡ್ಡದಲ್ಲಿ ಅತ್ತೂರು-ಕೊಡೆತ್ತೂರು ಗ್ರಾಮಸ್ಥರ ತೂಟೆದಾರ (ತೆಂಗಿನ ಗರಿಗಳನ್ನು ಒಟ್ಟಗೂಡಿಸಿ ಕಟ್ಟಿ ಬೆಂಕಿ ಉರಿಸಿ ಪರಸ್ಪರ ಎಸೆಯುವ ಹರಕೆ ಸೇವೆ) ಆರಂಭವಾದ ನಂತರ ರಥಬೀದಿಯಲ್ಲಿ ತೂಟೆದಾರ ನಡೆಯುತ್ತದೆ. ಅದಾದ ಬಳಿಕ ಓಕುಳಿ ಸ್ನಾನ ಹಾಗು ಪ್ರಸಾದ ವಿತರಣೆ ನಡೆಯುತ್ತದೆ.
ಜಳಕದ ಬಲಿ ಸಂದರ್ಭದಲ್ಲಿ ಶಿಬರೂರು ಕೊಡಮಣಿತ್ತಾಯ ಹಾಗೂ ದೇವರ ಭೇಟಿ ದರ್ಶನ ನಡೆದ ಬಳಿಕ ವಸಂತ ಪೂಜೆ, ಚಿನ್ನದ ರಥೋತ್ಸವ, ಧ್ವಜಾವರೋಹಣ, ಬೀದಿಯಲ್ಲಿ ಕೊಡಮಣಿತ್ತಾಯ ದೈವದ ನೇಮ ನಡೆಯಿತು.
ತೂಟೆದಾರ ಎಂದರೇನು?: ಪೊರಕೆಯಂತೆ ಸುತ್ತಲಾಗಿರುವ ತೆಂಗಿನಗರಿಗಳಿಗೆ ಒಂದು ತುದಿಯಿಂದ ಬೆಂಕಿ ಹಚ್ಚುತ್ತಾರೆ. ಇದಕ್ಕೆ ತುಳುವಿನಲ್ಲಿ ತೂಟೆ ಎನ್ನುತ್ತಾರೆ. ಒಂದೆಡೆ ಅತ್ತೂರು, ಇನ್ನೊಂದೆಡೆ ಕೊಡೆತ್ತೂರು ಮಾಗಣೆಯವರು ನಿಂತು, ಅಗ್ನಿ ಹಚ್ಚಿದ ತೆಂಗಿನಗರಿಗಳ ‘ಪಂಜ’ನ್ನು ಪರಸ್ಪರರ ಮೇಲೆ ಎಸೆಯುತ್ತಾರೆ. ತೂರಿ ಬರುವ ಗರಿಗಳಿಂದ ಉದುರುವ ಬೆಂಕಿಯ ಕಿಡಿಗಳು, ಮೈಮೇಲೆ ಬಿದ್ದರೂ ಈ ಆಟದಲ್ಲಿ ತೊಡಗಿರುವವರಿಗೆ ಏನೂ ಆಗುವುದೇ ಇಲ್ಲ. ಪೈಪೋಟಿಗೆ ಬಿದ್ದವರಂತೆ ಅವರೆಲ್ಲ ಈ ‘ಬೆಂಕಿಯ ಓಕುಳಿ’ಯಲ್ಲಿ ಆಡುತ್ತಾರೆ.
ಇದರಲ್ಲಿ ಯಾರು ಭಾಗಿಯಾಗುವವರು?: ಕೊಡೆತ್ತೂರು ಮತ್ತು ಅತ್ತೂರು ಮಾಗಣೆಗಳು ಕಟೀಲಿಗೆ ಸಂಬಂಧಿಸಿದ ಮಾಗಣೆಗಳು. ಈ ಎರಡೂ ಮಾಗಣೆಗಳ ವ್ಯಾಪ್ತಿಯಲ್ಲಿ 8 ಊರುಗಳು ಬರುತ್ತವೆ. ಈ ಊರುಗಳಲ್ಲಿ ತೂಟೆದಾರ ಸೇವೆ ಮಾಡುವ ಮನೆತನಗಳು ಇವೆ. ವಂಶಪಾರಂಪರ್ಯವಾಗಿ ಅವರು ಈ ಸೇವೆ ಮಾಡುತ್ತಿದ್ದಾರೆ.
ಇದು ಅತ್ಯಂತ ಸಂಪ್ರದಾಯಬದ್ಧ ಹಾಗೂ ನಿಯಮಬದ್ಧವಾಗಿ ನಡೆಯುವ ಧಾರ್ಮಿಕ ಸೇವೆ. ಇಂತಹ ಸೇವೆ ಮಾಡುವ ಮನೆಯವರು ಒಂದು ಮನೆಯಿಂದ ಒಬ್ಬರು ಮಾತ್ರ ಇದರಲ್ಲಿ ಭಾಗವಹಿಸುತ್ತಾರೆ. ಸೂತಕ ಇದ್ದರೆ ಬರುವ ಹಾಗಿಲ್ಲ. ಆ ಮನೆತನದವರ ಬದಲು ಬೇರೆಯವರು ಬರುವಂತೆಯೂ ಇಲ್ಲ. ಹೀಗೆ ಹಲವು ನಿಯಮಗಳಿವೆ. ಇದು ಪರಂಪರಾಗತವಾಗಿ ನಡೆದುಕೊಂಡು ಬಂದಿರುವ ಸೇವೆಯಾಗಿದೆ.
ಈ ಪದ್ದತಿ ಯಾಕೆ?: ಕಟೀಲು ದುರ್ಗಾಪರಮೇಶ್ವರಿಗೆ ಅರುಣಾಸುರ ಮರ್ದಿನಿ ಎಂದು ಕರೆಯುವುದೂ ಉಂಟು. ಅರುಣಾಸುರನನ್ನು ಸಂಹರಿಸಿದ ದೇವಿ, ವಿಜಯಶಾಲಿಯಾಗಿ ಮರಳಿದಾಗ ಬೆಂಕಿಯ ಸ್ವಾಗತ ಕೋರಲಾಗಿತ್ತು. ಅದರ ಸ್ಮರಣಾರ್ಥ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ತೂಟೆದಾರ ಸೇವೆ ನಡೆಯುತ್ತದೆ. ಇದು ದುರ್ಗಾಪರಮೇಶ್ವರಿಗೆ ಬಲು ಇಷ್ಟದ ಆಟ ಎಂಬುದು ಪ್ರತೀತಿ.
1 Comment