LATEST NEWS
ಹಿಜಬ್ ಪ್ರತಿಭಟನೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಕೈವಾಡ – ಆರ್ ಅಶೋಕ್

ಉಡುಪಿ ಫೆಬ್ರವರಿ 19: ಹಿಜಾಬ್ ನಿರ್ಬಂಧದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಭಯೋತ್ಪಾದನಾ ಸಂಘಟನೆಗಳ ಹಾಗೂ ವಿದೇಶಿ ದುಷ್ಟಶಕ್ತಿಗಳ ಕೈವಾಡವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಹಿಜಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಎಂದು ಕಂದಾಯ ಸಚಿವ ಆರ್. ಅಶೋಕ್ ಆರೋಪಿಸಿದರು.
ಪಾಕಿಸ್ತಾನ, ಇರಾನ್, ಇರಾಕ್, ಅಫ್ಗಾನಿಸ್ತಾನ ದೇಶಗಳು ಹಿಜಾಬ್ ಪರವಾಗಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ವಿವಾದದ ಹಿಂದೆ ಉಗ್ರಗಾಮಿಗಳ ಕೈವಾಡವಿರುವುದು ಕಾಣುತ್ತದೆ ಎಂದರು. ಮಕ್ಕಳು ಶಾಲೆಗಳಿಗೆ ಹೋಗುವುದು ವಿದ್ಯೆ ಕಲಿಯಲು ಮಾತ್ರ. ಮತಾಂತರ ಹಾಗೂ ಧರ್ಮ ಪ್ರಚಾರ ಮಾಡುವುದಕ್ಕಲ್ಲ. ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಹಾಕುವಂತಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧರ್ಮಕ್ಕಿಂತ ದೇಶ ದೊಡ್ಡದು ಎಂಬ ತತ್ವವನ್ನು ಎಲ್ಲರೂ ಪಾಲಿಸಬೇಕು. ದೇಶದ ಅನ್ನ ತಿನ್ನುವ, ನೀರು ಕುಡಿಯುವವರು ನೆಲದ ಕಾನೂನುಗಳನ್ನು ಪಾಲಿಸುವುದು ನಿಜವಾದ ಧರ್ಮ ಎಂದು ಅಶೋಕ್ ಹೇಳಿದರು.