KARNATAKA
ಸೆಲ್ಪಿ ತೆಗೆಯಲು ಹೋಗಿ ಕಾಳಿ ನದಿ ಪಾಲಾಗಿದ್ದ ಯುವ ಜೋಡಿ ಶವಪತ್ತೆ
ಕಾರವಾರ : ಸೆಲ್ಫಿ ತೆಗೆಯಲು ಹೋಗಿ ಕಾಳಿ ನದಿಗೆ ಬಿದ್ದು ನೀರುಪಾಲಾಗಿದ್ದ ಯುವ ಜೋಡಿಯ ಮೃತ ದೇಹ ಇಂದು ಪತ್ತೆಯಾಗಿದೆ. ಮೃತರನ್ನು ಬೀದರ್ ನ ಕರ್ನಾಟಕ ಕಾಲೇಜ್ ನ ಬಿಎ ವಿದ್ಯಾರ್ಥಿ ಪುರುಷೋತ್ತಮ ಪಾಟೀಲ ಹಾಗೂ ಬೀದರ್ ಮೂಲದ ಕಲಬುರ್ಗಿಯಲ್ಲಿ ಕಾಲೇಜ್ ವಿದ್ಯಾಭ್ಯಾಸ ಮಾಡುತ್ತಿರುವ ರಕ್ಷಿತಾ ಎಂದು ಗುರುತಿಸಲಾಗಿದೆ.
ಸೋಮವಾರ ಇಬ್ಬರು ದಾಂಡೇಲಿಯಿಂದ ಬಂದಿದ್ದ ಜೋಡಿ ಅಂಬಿಕಾ ನಗರದ ಸೂಪಾ ಅಣೆಕಟ್ಟೆಯ ಸಮೀಪ ಇರುವ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದರು. ಈ ಸಂದರ್ಭ ಯುವತಿಯ ಮೊಬೈಲ್ ಕೈ ತಪ್ಪಿ ಕೆಳಗೆ ಬಿದ್ದಿದೆ ಇದನ್ನು ಹಿಡಿಯಲು ಹೋದ ಯುವತಿ ಆಯತಪ್ಪಿ ನದಿಗೆ ಬಿದ್ದಿದ್ದಾಳೆ, ಯುವತಿಯನ್ನು ರಕ್ಷಣೆ ಮಾಡಲು ಹೋದ ಯುವಕನು ಕೂಡ ಕಾಳಿ ನದಿ ಪಾಲಾಗಿದ್ದ.
ಸೇತುವೆ ಮೇಲೆ ಸಿಕ್ಕ ಯುವತಿಯ ಮೊಬೈಲ್ ಆಧಾರದ ಮೇಲೆ ಆಕೆಯ ಮನೆಗೆ ಕರೆ ಮಾಡಿ ಗುರುತು ತಿಳಿದುಕೊಳ್ಳಲಾಗಿತ್ತು. ಮಂಗಳವಾರ ಬೆಳಗ್ಗೆ ಫ್ಲೈ ಕ್ಯಾಚರ್ ಎಂಬ ರ್ಯಫ್ಟಿಂಗ್ ತಂಡದ ಸದಸ್ಯರು ಇಬ್ಬರ ಶವಗಳನ್ನು ಕಾಳಿ ನದಿಯಿಂದ ಹುಡುಕಿ ಹೊರ ತೆಗೆದಿದ್ದಾರೆ. ರಾಮನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You must be logged in to post a comment Login