KARNATAKA
ಲಾಕ್ಡೌನ್ ಕುರಿತಂತೆ ಸುಮ್ಮನೆ ಸುಳ್ಳು ಹೇಳಬೇಡಿ ಎಂದ ಸಿಎಂ ಯಡಿಯೂರಪ್ಪ
ಬೀದರ್ ಎಪ್ರಿಲ್ 13: ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಲಾಕ್ಡೌನ್ ಮಾಡಲು ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ ಎನ್ನುವುದನ್ನು ಸಿಎಂ ಯಡಿಯೂರಪ್ಪ ನಿರಾಕರಿಸಿದ್ದು, ಸುಮ್ಮನೆ ಜನರಿಗೆ ತಪ್ಪು ಹೇಳಲು ಹೋಗಬೇಡಿ ಎಂದ ಅವರು ಸದ್ಯಕ್ಕೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಿಎಂ ಯಡಿಯೂರಪ್ಪ ನೀಡಿರುವ ಸೂಚನೆಯನ್ನು ಧಿಕ್ಕರಿಸಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಧ್ಯಮಗಳಿಗೆ ಕೊರೊನಾ ಲಾಕ್ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದು, ತಾಂತ್ರಿಕ ಸಲಹಾ ಸಮಿತಿ ಲಾಕ್ಡೌನ್ ಮಾಡಲು ಸೂಚಿಸಿದೆ ಎಂದು ಹೇಳಿದ್ದರು. ಆದರೆ, ಇದೆಲ್ಲವನ್ನೂ ಸ್ಪಷ್ಟವಾಗಿ ನಿರಾಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬೀದರ್ನ ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,’ನಾನು ಕೂಡಾ ಸಲಹಾ ಸಮಿತಿಯಲ್ಲಿ ಇದ್ದೇನೆ. ಯಾರೂ ಲಾಕ್ಡೌನ್ಗೆ ಸೂಚನೆ ನೀಡಿಲ್ಲ. ಸುಮ್ಮನೇ ತಪ್ಪು ಹೇಳಬೇಡಿ. ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್ಡೌನ್ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ. ಕೊರೊನಾ ತಡೆಯಲು ಜನತೆ ಸಹಕಾರ ನೀಡಬೇಕು. ಜನರು ಇದನ್ನು ಮರೆತರೆ ಅನಾಹುತ ಆಗಲಿದೆ. ಕೊರೊನಾ ತಡೆ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಸಲಹೆ ಪಡೆದು ತೀರ್ಮಾನಿಸುತ್ತೇವೆ. ಏನೇನು ಮಾಡಬೇಕೆಂದು ನಂತರ ನಿರ್ಧರಿಸುತ್ತೇವೆ ಎಂದು ಹೇಳಿದರು.
You must be logged in to post a comment Login