LATEST NEWS
ಬರ್ತ್ ಡೇ ಗಿಪ್ಟ್ ಹಣವನ್ನು ಪ್ರವಾಹ ಸಂತ್ರಸ್ತರ ನಿಧಿಗೆ ನೀಡಿ ಮಾದರಿಯಾದ ಬಾಲಕಿ

ಬರ್ತ್ ಡೇ ಗಿಪ್ಟ್ ಹಣವನ್ನು ಪ್ರವಾಹ ಸಂತ್ರಸ್ತರ ನಿಧಿಗೆ ನೀಡಿ ಮಾದರಿಯಾದ ಬಾಲಕಿ
ಮಂಗಳೂರು ಅಗಸ್ಟ್ 27: ಜನ್ಮದಿನದಿಂದು ಬೇಕಾಬಿಟ್ಟಿ ಖರ್ಚು ಮಾಡುವವರ ನಡುವೆ 10ರ ಹರೆಯದ ಬಾಲಕಿ 10 ಸಾವಿರ ರೂಪಾಯಿ ಮೊತ್ತದ ಚೆಕ್ ನ್ನು ಪ್ರವಾಹ ಸಂತ್ರಸ್ತರ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ ಮಾದರಿಯಾಗಿದ್ದಾಳೆ.
ಮಂಗಳೂರು ಹೊರವಲಯದ ಕಿನ್ಯಾ ಶಾರದಾ ವಿದ್ಯಾ ನಿಕೇತನ ಆಂಗ್ಲಮಾಧ್ಯಮ ಶಾಲೆಯ 5ನೇ ತರಗತಿ ವಿಧ್ಯಾರ್ಥಿನಿ ಸನ್ಮತಿ ಪ್ರವಾಹ ಸಂತ್ರಸ್ತರ ನಿಧಿಗೆ ಸಹಾಯ ಮಾಡಿದ ಬಾಲಕಿ ಸನ್ಮತಿ ಜಿಲ್ಲಾ ಪಿಯುಸಿ ಇಲಾಖೆ ಶಾಖಾಧಿಕಾರಿ ನಿತಿನ್ ಅವರ ಎರಡನೇ ಪುತ್ರಿ , ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಮೊಮ್ಮಗಳು. ಈಕೆಗೆ ಹುಟ್ಟಿದ ದಿನದ ಸಂಭ್ರಮಕ್ಕೆ ಅಜ್ಜಿ ನೀಡಿದ್ದ ಮೊತ್ತ ಖರ್ಚು ಮಾಡದೆ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡಿದ್ದಾಳೆ.

ನೆರೆ ಸಂತ್ರಸ್ಥರಿಗೆ ನನ್ನ ಕಿಂಚಿತ್ ಕಾಣಿಕೆ ಎಂಬ ಪತ್ರವನ್ನು ಚೆಕ್ ಜೊತೆಗೆ ಇರಿಸಿ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನೀಡಿದ್ದಾಳೆ.
ಅಗಸ್ಟ್ 25 ರಂದು ಹುಟ್ಟುಹಬ್ಬ ಆಚರಿಸಿಕೊಂಡ ಸನ್ಮತಿ ಅಂದು ತಂದೆ ತಾಯಿ ಹುಟ್ಟಿದ ದಿನದ ಉಡುಗೊರೆ ನೀಡಿದ್ದರು. ಕುತ್ತಾರು ಪದವಿನ ಮನೆಯಲ್ಲಿ ಸಣ್ಣಮಟ್ಟಿನ ಸಂಭ್ರಮ ಆಚರಿಸಲಾಗಿತ್ತು.
ಸೋಮವಾರ ಶಾಲೆಗೆ ತೆರಳುವ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲೇ ಆಗಮಿಸಿದ ಸನ್ಮತಿ 10 ಸಾವಿರ ರೂಪಾಯಿ ಚೆಕ್ ನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಹಸ್ತಾಂತರಿಸಿದಳು. ಈ ಬಾಲೆಯ ಹೃದಯವಂತಿಕೆಗೆ ಜಿಲ್ಲಾಧಿಕಾರಿ ಧನ್ಯವಾದಗಳನ್ನು ತಿಳಿಸಿದ್ದಾರೆ.