DAKSHINA KANNADA
ತಾಂಬೂಲ ಪ್ರಶ್ನೆ ನಡೆದ ಮರುದಿನವೇ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲೇ ದುರ್ಘಟನೆ

ಪುತ್ತೂರು ಫೆಬ್ರವರಿ 17: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಹೆಸರಾಂತ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದೆ. ದೇವಸ್ಥಾನದ ಆವರಣದಲ್ಲಿರುವ ತೆಂಗಿನ ಮರಗಳನ್ನು ಕಡಿಯುವ ಸಂದರ್ಭದಲ್ಲಿ ಮರದ ತುಂಡೊಂದು ಕ್ಷೇತ್ರದ ನಿತ್ಯ ಕಾರ್ಮಿಕನೋರ್ವನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ತಾಂಬೂಲ ಪ್ರಶ್ನೆ ನಡೆದ ಮರುದಿನವೇ ಈ ಘಟನೆ ನಡೆದಿರೋದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ.
ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ದೇವಸ್ಥಾನದ ಆವರಣದಲ್ಲಿದ್ದ ಮನೆಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದೀಗ ಜಾಗದಲ್ಲಿದ್ದ ಎಲ್ಲಾ ಮರಗಳನ್ನು ಕಡಿದು ನೆಲಸಮಗೊಳಿಸುವ ಕಾಮಗಾರಿಗಳು ಆರಂಭಗೊಂಡಿದೆ. ಅಭಿವೃದ್ಧಿ ವಿಚಾರದಲ್ಲಿ ದೇವರಿಗೆ ತೃಪ್ತಿಯಿದೆಯೋ ಎಂದು ಕೇಳುವ ಹಿನ್ನಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಫೆ. 16 ರಂದು ತಾಂಬೂಲ ಪ್ರಶ್ನೆಯನ್ನೂ ನೆರವೇರಿಸಲಾಗಿತ್ತು. ತಾಂಬೂಲ ಪ್ರಶ್ನೆಯಲ್ಲಿ ಕೆಲವು ವಿಚಾರಗಳ ಬಗ್ಗೆ ದೋಷವೂ ಕಂಡಯ ಬಂದಿದೆ. ದೇವಸ್ಥಾನದ ಆವರಣದಲ್ಲಿದ್ದ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮನೆ ಮಂದಿಗೆ ಪರಿಹಾರ ನೀಡಿರೋದು ಸರಿಯಾದ ಕ್ರಮವಲ್ಲ ಎಂದು ತಾಂಬೂಲ ಪ್ರಶ್ನೆ ಇಟ್ಟ ದೈವಜ್ಞರು ತಿಳಿಸಿದ್ದಾರೆ. ಅಲ್ಲದೆ ದೇವಸ್ಥಾನದ ಪರಿಸರದಲ್ಲಿ ಸ್ತ್ರೀ ಹತ್ಯಾ ದೋಷವೂ ಕಂಡು ಬಂದಿದ್ದು, ಈ ಎಲ್ಲಾ ದೋಷಗಳಿಗೆ ಪರಿಹಾರ ಕಂಡುಕೊಳ್ಳವಂತೆಯೂ ಸೂಚಿಸಲಾಗಿತ್ತು.

ದೇವಸ್ಥಾನದ ಜಾಗವನ್ನು ಬಿಟ್ಟುಕೊಡಲು ನಿರಾಕರಿಸಿದ ಕುಟುಂಬಗಳ ಕಣ್ಣಿಗೆ ತೊಂದರೆಯಾಗಲಿದೆ ಎನ್ನುವ ವಿಚಾರವೂ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿತ್ತು. ಪ್ರಶ್ನೆ ನಡೆದ ಮರುದಿನವೇ ದೇವಸ್ಥಾನದ ಆವರಣದಲ್ಲೇ ದುರ್ಘಟನೆಯೊಂದು ನಡೆದಿದ್ದು, ದೇವಸ್ಥಾನದ ನಿತ್ಯ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರಗೆ ದಾಖಲಾಗಿದ್ದಾರೆ. ದೇವಸ್ಥಾನದ ಆವರಣದಲ್ಲಿದ್ದ ತೆಂಗಿನ ಮರಗಳನ್ನೆಲ್ಲಾ ಕಡಿದು ನೆಲಸಮ ಮಾಡುವ ಸಂದರ್ಭದಲ್ಲಿ ತೆಂಗಿನ ಮರದ ತುಂಡು ಕಾರ್ಮಿಕನ ತಲೆ ಮತ್ತು ಮುಖದ ಭಾಗಕ್ಕೆ ರಭಸದಿಂದ ಗುದ್ದಿದ ಪರಿಣಾಮ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ದೇವಸ್ಥಾನದ ಆವರಣದಲ್ಲೇ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.
ದೇವಸ್ಥಾನದ ಆವರಣದಲ್ಲಿದ್ದ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಡೆದುಕೊಂಡ ಕ್ರಮದ ಬಗ್ಗೆಯೂ ಗೊಂದಲ ಏರ್ಪಟ್ಟಿತ್ತು. ಸಮಿತಿಯ ಕ್ರಮದ ಬಗ್ಗೆ ಪರ ಮತ್ತು ವಿರೋಧಾಭಿಪ್ರಾಯಗಳೂ ಮೂಡಿದ್ದವು. ಇದೀಗ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ….