KARNATAKA
ಗಂಭೀರ ಸ್ಥಿತಿಯಲ್ಲಿ ಪುನಿತ್ ರಾಜ್ ಕುಮಾರ್, ಸದ್ಯ ಎನೂ ಹೇಳಲಾಗದು ಎಂದ ವೈದ್ಯರು
ಬೆಂಗಳೂರು ಅಕ್ಟೋಬರ್ 29: ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಿಮ್ ನಲ್ಲಿ ಕಸರತ್ತು ಮಾಡುವ ವೇಳೆಯಲ್ಲಿ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆ ಕಂಡುಬಂದಿದ್ದು, ತಕ್ಷಣ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತುರ್ತು ನಿಗಾ ಘಟಕದಲ್ಲಿ ಅವರಿಗೆ ಇಸಿಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ.
ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವಿಕ್ರಂ ಆಸ್ಪತ್ರೆಯ ವೈದ್ಯರು ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯೊಂದಕ್ಕೆ ತೆರಳಿ ಅಲ್ಲಿ ಚಿಕಿತ್ಸೆ ಪಡೆದಿದ್ದರು. ಇಸಿಜಿ ಮಾಡಿಸಿಕೊಂಡು ವಿಕ್ರಂ ಆಸ್ಪತ್ರೆಗೆ ಬಂದಿದ್ದರು. ಅವರು ಗಂಭೀರವಾಗಿದ್ದರು. ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಅವರ ಆರೋಗ್ಯದ ಬಗ್ಗೆ ಏನನನ್ನೂ ಹೇಳಲು ಸಾಧ್ಯವಿಲ್ಲ,‘ ಎಂದು ವೈದ್ಯರು ತಿಳಿಸಿದರು. ‘ಹೃದಯಾಘಾತಕ್ಕೆ ನೀಡಬೇಕಾದ ಚಿಕಿತ್ಸೆಗಳನ್ನು ನೀಡಿದ್ದೇವೆ. ನಾವು ಈಗಲೂ ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಅವರ ಪರಿಸ್ಥಿತಿ ತೀರ ಗಂಭೀರವಾಗಿದೆ. ಇನ್ನೂ ಕೆಲವೇ ಸಮಯದಲ್ಲಿ ಅವರ ಆರೋಗ್ಯದ ಬಗ್ಗೆ ಮತ್ತೊಮ್ಮೆ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.
ಶಿವರಾಜ್ ಕುಮಾರ್ ಪುತ್ರಿ ಸೇರಿದಂತೆ ಹಲವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ವಿಕ್ರಂ ಆಸ್ಪತ್ರೆಗೆ ಅಭಿಮಾನಿಗಳು ಆಗಮಿಸುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನಿವಾಸದ ಬಳಿಯೂ ಭಾರೀ ಭದ್ರತೆ ಒದಗಿಸಲಾಗಿದೆ.
You must be logged in to post a comment Login