LATEST NEWS
ಶಬರಿಮಲೆ ವಿವಾದ ಭಕ್ತರ ಪರ ನಿಂತ ಪ್ರಧಾನಿ ನರೇಂದ್ರ ಮೋದಿ

ಶಬರಿಮಲೆ ವಿವಾದ ಭಕ್ತರ ಪರ ನಿಂತ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ ಜನವರಿ 1: ಕೇರಳದಲ್ಲಿ ನಡೆಯುತ್ತಿರುವ ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಅಯ್ಯಪ್ಪ ಭಕ್ತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ನಿಂತಿದ್ದಾರೆ. ಸುಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠದ ತೀರ್ಪಿನ ಸಂದರ್ಭದಲ್ಲಿ ಮಹಿಳಾ ನ್ಯಾಯಮೂರ್ತಿಗಳ ತೀರ್ಪನ್ನು ಅಧ್ಯಯನ ಮಾಡಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.
ಶಬರಿಮಲೆ ಗೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದ ನಂತರ ಕೇರಳ ಸರಕಾರ ಮಹಿಳೆಯ ಪ್ರವೇಶಕ್ಕೆ ಪೊಲೀಸ್ ಬಲದ ಮೂಲಕ ಪ್ರಯತ್ನಿಸುತ್ತಿದೆ. ಆದರೆ ಅಯ್ಯಪ್ಪ ಭಕ್ತರ ತೀವ್ರ ಪ್ರತಿಭಟನೆಯಿಂದಾಗಿ ನಿಷೇಧಿತ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಇಲ್ಲಿಯವರೆಗೆ ಸಾಧ್ಯವಾಗಲಿಲ್ಲ.

ಶಬರಿಮಲೆ ವಿವಾದ ಹಾಗೂ ತ್ರಿವಳಿ ತಲಾಕ್ ಎರಡನ್ನು ಹೋಲಿಕೆ ಮಾಡಿ ಬುದ್ದಿ ಜೀವಿಗಳು ಮಹಿಳೆಯರ ಸಮಾನತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದರು.
ಈ ಕುರಿತಂತೆ ಇಂದು ಎಎನ್ ಐ ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ ಪ್ರದಾನಿ ನರೇಂದ್ರ ಮೋದಿ ಮುಸ್ಲಿಂ ರಾಷ್ಟ್ರಗಳಲ್ಲೇ ತ್ರಿವಳಿ ತಲಾಕ್ ವಿರುದ್ದ ಕಾನೂನು ಇದ್ದು, ಪಾಕಿಸ್ಥಾನದಲ್ಲೂ ತ್ರಿವಳಿ ತಲಾಕ್ ಗೆ ನಿಷೇಧ ಇದೆ ಎಂದು ಹೇಳಿದರು.
ಆದರೆ ಶಬರಿಮಲೆಗೆ 10 ರಿಂದ 50 ವರ್ಷ ವಯಸ್ಸಿನೊಳಗಿನ ಮಹಿಳೆಯರ ಪ್ರವೇಶ ನಿಷೇಧ ಹಿಂದೂ ಧರ್ಮದ ಸಂಪ್ರದಾಯವಾಗಿದ್ದು, ದೇಶದಲ್ಲಿ ಪ್ರತಿಯೊಂದು ದೇವಾಲಯಗಳಿಗೆ ಅದರದ್ದೇ ಆದ ಸಂಪ್ರದಾಯವಿದೆ. ದೇಶದಲ್ಲಿ ಪುರುಷರಿಗೆ ಪ್ರವೇಶ ಇಲ್ಲದ ಎಷ್ಟೋ ದೇವಸ್ಥಾನಗಳಿವೆ. ಇಲ್ಲಿ ಮಹಿಳೆಯರ ಸಮಾನತೆಯ ಪ್ರಶ್ನೆ ಬರುವುದಿಲ್ಲ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ನ ಸಂವಿಧಾನಿಕ ಪೀಠ ತೀರ್ಪು ನೀಡುವಾಗ 5 ನ್ಯಾಯಮೂರ್ತಿಗಳಲ್ಲಿ 4 ನ್ಯಾಯಮೂರ್ತಿಗಳ ತೀರ್ಪಿಗೆ ವಿರುದ್ದವಾಗಿ ಸಾಂವಿಧಾನಿಕ ಪೀಠದಲ್ಲಿ ನ್ಯಾಯಾಧೀಶೆಯಾಗಿರುವ ಇಂದು ಮಲ್ಹೋತ್ರಾ ತೀರ್ಪು ನೀಡಿದ್ದರು. ಮಹಿಳಾ ನ್ಯಾಯಾಧೀಶರ ತೀರ್ಪನ್ನು ಕೂಲಂಕುಷವಾಗಿ ಅಧ್ಯಯನ ನಡೆಸಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.