ಮಂಗಳೂರು ಮೇ 31: ಕರಾವಳಿಯಲ್ಲಿ ಸುರಿದ ಭಾರೀ ಮಳೆ ದೊಡ್ಡ ದುರಂತವನ್ನೆ ಮಾಡಿದೆ. ಉಳ್ಳಾಲದ ಮೊಂಟೆಪದವಿನಲ್ಲಿ ನಡೆದ ದುರಂತ ಮಾತ್ರ ಇಡೀ ದಕ್ಷಿಣಕನ್ನಡ ಜಿಲ್ಲೆಯನ್ನೇ ಮೌನಕ್ಕೆ ದೂಡಿದೆ. ಇದೀಗ ದುರಂತದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದ ಅಶ್ವಿನಿ ಅವರು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ.

ಕರಾವಳಿಯಲ್ಲಿ ಮುಂಗಾರು ಮಳೆ ಮಾಡಿರುವ ಅನಾಹುವ ಮಾತ್ರ ಅಷ್ಠಿಷ್ಟಲ್ಲ. ನೆಮ್ಮದಿಯ ನಿದ್ರೆಯಲ್ಲಿದ್ದ ಒಂದು ಕುಟುಂಬವನ್ನೇ ಮಳೆ ಬೀದಿ ಪಾಲಾಗಿಸಿದೆ. ಮೇ 30ರ ಬೆಳಗಿನ ಜಾವ ಭಾರೀ ಮಳೆಯಿಂದ ಮೊಂಟೆಪದವಿನಲ್ಲಿ ಮನೆ ಮೇಲೆ ಗುಡ್ಡ ಕುಸಿದಿತ್ತು. ಅವಶೇಷಗಳ ಅಡಿ ಸಿಲುಕಿದ್ದ ಮಹಿಳೆ ಅಶ್ವಿನಿ, ಅವರ ಇಬ್ಬರು ಮಕ್ಕಳನ್ನು ಬಿಗಿದಪ್ಪಿ ಕಾಪಾಡಲು ಯತ್ನಿಸಿದ್ದರು. ಆದರೆ ಒಂದು ಮಗು ಅಲ್ಲಿಯೇ ಸಾವನ್ನಪ್ಪಿತ್ತು. ಇನ್ನೊಂದು ಮಗು ರಕ್ಷಣೆ ಮಾಡಿ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗ ಮಧ್ಯೆ ಸಾವನ್ನಪ್ಪಿತ್ತು. ಗಾಯಗೊಂಡಿದ್ದ ಅಶ್ವಿನಿಯವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಹಿಳೆಯ ಸಂಪೂರ್ಣ ಸ್ವಾಧೀನ ಕಳೆದುಕೊಂಡಿರುವ ಕಾಲುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಕತ್ತರಿಸಿದ್ದಾರೆ. ಒಂದು ಕಾಲಿನ ಪಾದದ ಭಾಗದಿಂದ ಕತ್ತರಿಸಲಾಗಿದೆ. ಮತ್ತೊಂದು ಪೂರ್ತಿ ಕಾಲು ಕತ್ತರಿಸಿದ್ದಾರೆ. 24 ಗಂಟೆಗಳ ಕಾಲ ವೈದ್ಯರು ಅವರ ಮೇಲೆ ನಿಗ ಇಟ್ಟಿದ್ದಾರೆ.
ಇನ್ನು, ಅಶ್ವಿನಿ ಪೂಜಾರಿ ಅವರಿಗೆ ತನ್ನ ಇಬ್ಬರು ಮಕ್ಕಳು ಮೃತಪಟ್ಟಿರುವ ವಿಚಾರ ಗೊತ್ತಿಲ್ಲ. ತನ್ನ ಇಬ್ಬರು ಮಕ್ಕಳು ಎಲ್ಲಿ ಎಂದು ಆಸ್ಪತ್ರೆಯಲ್ಲಿ ನೋವಿನಲ್ಲೇ ಅಶ್ವಿನಿ ಅವರು ಕನವರಿಸುತ್ತಿದ್ದನ್ನು ಕಂಡು ಕುಟುಂಬಸ್ಥರು ಕಣ್ಣಂಚುಗಳು ಒದ್ದೆಯಾಗಿವೆ. ಆದರೆ, ಸಂಬಂಧಿಕರು ಮಕ್ಕಳ ಸಾವಿನ ವಿಚಾರವನ್ನು ಅಶ್ವಿನಿ ಅವರಿಗೆ ಇನ್ನೂವರೆಗೂ ತಿಳಿಸಿಲ್ಲ.

ಘಟನೆಯಲ್ಲಿ ಮೃತಪಟ್ಟ ಮೂವರನ್ನು ಮನೆ ಕುಸಿದ ಪಕ್ಕದಲ್ಲೇ ಅಂತ್ಯಕ್ರಿಯೆ ಮಾಡಿದ್ದಾರೆ. ಇಬ್ಬರು ಮಕ್ಕಳಾದ ಆರ್ಯನ್ ಮತ್ತು ಆರುಷ್ ಮೃತದೇಹವನ್ನು ಮಣ್ಣಿನಲ್ಲಿ ಹೂಳಲಾಗಿದೆ. ಪಕ್ಕದಲ್ಲೇ ಅಜ್ಜಿ ಪ್ರೇಮಾ ಅವರ ಶವಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿದೆ.
https://youtu.be/WjKXai58wJM