Connect with us

    KARNATAKA

    ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧ: ಕಾಂಗ್ರೆಸ್‌

    ಬೆಂಗಳೂರು, ಆಗಸ್ಟ್ 05: ಧರ್ಮಸ್ಥಳದ ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ. ಶುಕ್ರವಾರ ಉಜಿರೆಯಲ್ಲಿ ನಡೆದ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಪ್ರತಿಭಟನೆ ವೇಳೆ ಸೌಜನ್ಯಾ ಕುಟುಂಬದ ಮೇಲೆ ಹಲ್ಲೆ ಯತ್ನವನ್ನು ಉಲ್ಲೇಖಿಸಿ ಕಾಂಗ್ರೆಸ್‌ ಹೀಗೆ ಹೇಳಿದೆ.

    ಈ ಬಗ್ಗೆ ‘ಎಕ್ಸ್’ ಮೈಕ್ರೋಬ್ಲಾಗಿಂಗ್‌ ಸೈಟ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌, ’ಧರ್ಮವೆಂದರೆ ನ್ಯಾಯ, ನ್ಯಾಯವನ್ನು ಕೇಳುವುದು ಕೂಡ ಧರ್ಮವೇ.. ಸೌಜನ್ಯಾ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಹೇಳಿದೆ.

    ಅಲ್ಲದೆ, ’ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯಾ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ’ ಎಂದು ಹೇಳಿದೆ. 2012ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಾ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಕೆಲವರು ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಇದನ್ನು ಖಂಡಿಸಿ ಶುಕ್ರವಾರ ಉಜಿರೆಯಲ್ಲಿ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ನೇತೃತ್ವದಲ್ಲಿ ಸಮಾವೇಶ, ಜಾಥಾ ಮತ್ತು ಹಕ್ಕೊತ್ತಾಯ ಕಾರ್ಯಕ್ರಮ ನಡೆಯಿತು.

    ಎಸ್‌ಡಿಎಂ ಕಾಲೇಜು ಬಳಿ ಶುಕ್ರವಾರ ನಡೆದ ಹಕ್ಕೊತ್ತಾಯ ಮಂಡನೆ ಸಭೆಯ ಸಂದರ್ಭದಲ್ಲಿ ಅಪರಿಚಿತರು ತಮ್ಮ ಮಾನಭಂಗಕ್ಕೆ ಯತ್ನಿಸಿದ್ದು ಮಗನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸೌಜನ್ಯಾ ಅವರ ತಾಯಿ ಕುಸುಮಾವತಿ ದೂರಿದ್ದಾರೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರತಿಭಟನೆ ಸಭೆ ಮುಕ್ತಾಯಗೊಳ್ಳುತ್ತಿದ್ದಂತೆ ಸೌಜನ್ಯಾ ತಾಯಿ ಕುಸುಮಾವತಿ, ಸಹೋದರಿಯರಾದ ಸೌಂದರ್ಯಾ, ಸೌಹಾರ್ದ, ಸಹೋದರ ಜಯರಾಮ ಮತ್ತು ಇಬ್ಬರು ಸಂಬಂಧಿಕರು ವೇದಿಕೆಯ ಬಳಿ ಕಂಡುಬಂದರು. ‘ನನ್ನ ಮಗಳ ಪರವಾಗಿ ನಡೆಯುತ್ತಿರುವ ಪ್ರತಿಭಟನೆ ಇದು. ಹೀಗಾಗಿ ವೇದಿಕೆ ಮೇಲೇರಲು ಅವಕಾಶ ನೀಡಬೇಕು’ ಎಂದು ತಾಯಿ ಮನವಿ ಮಾಡಿದರು. ಆದರೆ ಆಯೋಜಕರು ಮತ್ತು ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.

    ಕೆಲವರು ಘೋಷಣೆ ಕೂಗುತ್ತ ಅವರತ್ತ ಧಾವಿಸಿದರು. ಪೊಲೀಸರು ರಕ್ಷಣಾ ಕೋಟೆ ನಿರ್ಮಿಸಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ‘ಯಾರೋ ಕೆಲವರು ನನ್ನ ಕೊರಳಪಟ್ಟಿ ಹಿಡಿದು ಎಳೆದಿದ್ದಾರೆ’ ಎಂದು ಜಯರಾಮ ದೂರಿದರು.

    ‘ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದು ಅಲ್ಲಿಗೆ ಕುಟುಂಬ ಸಮೇತ ಹೋಗಿದ್ದೆ. ವೇದಿಕೆಯತ್ತ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಇತರರ ಜೊತೆ ಸೇರಿಕೊಂಡು ಮೈ ಮುಟ್ಟಿ ಚೂಡಿದಾರದ ವೇಲ್‌ ಎಳೆದಿದ್ದಾನೆ. ಮಗ ಜಯರಾಮನ ಮೇಲೆಯೂ ಹಲ್ಲೆ ಮಾಡಿದ್ದಾನೆ’ ಎಂದು ಕುಸುಮಾವತಿ ದೂರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply