LATEST NEWS
ಮಹಾರಾಷ್ಟ್ರದಿಂದ ಬಂದರೆ ಕೊರೊನಾ ಪರೀಕ್ಷೆ ಇಲ್ಲ…..!!
ಕೊರೊನಾ ಸೊಂಕಿನ ಲಕ್ಷಣ ಇದ್ದರೆ ಮಾತ್ರ ಕೊವೀಡ್ 19 ಟೆಸ್ಟ್
ಮಂಗಳೂರು ಜೂನ್ 3: ರಾಜ್ಯದಲ್ಲಿ ಇನ್ನುಮಂದೆ ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕೊರೊನಾ ಪರೀಕ್ಷೆ ನಡೆಸುವುದಿಲ್ಲ, ಕೇವಲ ಕೊರೊನಾ ಸೊಂಕಿನ ಲಕ್ಷಣ ಇದ್ದರೆ ಮಾತ್ರ ಕೊವಿಡ್ 19 ಟೆಸ್ಟ್ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು ಕೊರೊನಾ ಬಗ್ಗೆ ಜನರು ಭಯಭೀತರಾಗಿದ್ದು ಇದನ್ನು ಸಾಮಾಜಿಕ ಪಿಡುಗು ಎಂದು ಬಣ್ಣಿಸಲಾಗುತ್ತಿದ್ದು , ಈ ಮನಸ್ಥಿತಿಯನ್ನು ಹೊಗಲಾಡಿಸುವ ಅವಶ್ಯಕತೆ ಇದೆ ಎಂದರು. ಇನ್ನು ಮಹಾರಾಷ್ಟ್ರದಿಂದ ಬಂದ 98% ಜನರಿಗೆ ಕೊರೊನಾ ಸೊಂಕು ಬಂದಿದ್ದು, ಜನರು ಆತಂಕ ಪಡುವ ಅವಶ್ಯಕತೆ ಇಲ್ಲ, ಮಹಾರಾಷ್ಟ್ರದಿಂದ ಬಂದವರನ್ನು ತಂತ್ರಜ್ಞಾನವನ್ನು ಬಳಸಿ ಶಿಸ್ತು ಬದ್ದವಾಗಿ ಅವರ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗುವುದು ಎಂದರು.
ಇನ್ನು ಮುಂದೆ ಕೊರೊನಾ ಸೊಂಕು ಬಂದರೆ ಸೊಂಕಿತ ವ್ಯಕ್ತಿಯ ಮನೆಯನ್ನೇ ಸೀಲ್ ಡೌನ್ ಮಾಡಲಾಗುವುದು, ಕಂಟೋನ್ಮೆಂಟ್ ಝೋನ್ ಗಳು ಇನ್ನು ಮುಂದೆ ಇರುವುದಿಲ್ಲ, ಕೇವಲ ಸೊಂಕಿತನ ಮನೆಯನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡಲಾಗುವುದು ಎಂದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಚಿವ ಸುಧಾಕರ್ ಜಿಲ್ಲೆಯ ಅಧಿಕಾರಿಗಳ ವಿರುದ್ದ ಗರಂ ಆದ ಘಟನೆ ನಡೆದಿದೆ. ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿದ್ದರೂ ಕೇವಲ 4 ರಲ್ಲಿ ಮಾತ್ರ ಕೊರೊನಾ ಪರೀಕ್ಷೆ ನಡೆಯುತ್ತಿದೆ. ಇನ್ನುಳಿದ ಕಾಲೇಜುಗಳಲ್ಲಿ ಯಾಕೆ ಟೆಸ್ಟ್ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಟೆಸ್ಟ್ ಮಾಡದ ಕಾಲೇಜುಗಳ ಅಡ್ಮೀಷನ್ ಹೋಲ್ಡ್ ಮಾಡುತ್ತೇನೆ, ಒಂದು ವಾರದ ಒಳಗೆ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕೊವಿಡ್ 19 ಟೆಸ್ಟ್ ಗೆ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ವೈದ್ಯಕೀಯ ಕಾಲೇಜುಗಳಿಗೆ ಸಚಿವ ಡಾ. ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು.
You must be logged in to post a comment Login