KARNATAKA
ಗ್ರಾಮ ಪಂಚಾಯಿತಿ ಚುನಾವಣೆಗೆ ಭಿಕ್ಷುಕನನ್ನು ನಿಲ್ಲಿಸಿದ ಗ್ರಾಮಸ್ಥರು…
ನಂಜನಗೂಡು, ಡಿಸೆಂಬರ್ 21: ಗ್ರಾಮ ಪಂಚಾಯತ್ ಚುನಾವಣೆ ರಂಗೇರುತ್ತಿರುವ ಸಮಯದಲ್ಲಿ ನಂಜನಗೂಡಿನಲ್ಲಿ ವಿಶೇಷ ಸನ್ನಿವೇಶವೊಂದು ನಡೆದಿದೆ. ಈ ಹಿಂದೆ ಆಯ್ಕೆಯಾದವರು ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತಾಲ್ಲೂಕಿನ ಬೊಕ್ಕಹಳ್ಳಿ ಯುವಕರು, ಗ್ರಾಮದ ಭಿಕ್ಷುಕರೊಬ್ಬರನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದಾರೆ.
ಸುಮಾರು 40 ವರ್ಷ ವಯಸ್ಸಿನ ಅಂಕ ನಾಯಕ, ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಬೊಕ್ಕಹಳ್ಳಿ ಗ್ರಾಮದಲ್ಲಿ ನಾಮಪತ್ರ ಸಲ್ಲಿಸಿರುವ ಭಿಕ್ಷುಕ ಗ್ರಾಮದ ಕೆಲ ಯುವಕರು, ಈ ವ್ಯಕ್ತಿಗೆ ಹೊಸ ಬಟ್ಟೆ ತೊಡಿಸಿ, ಕನ್ನಡಕ ಹಾಕಿಸಿ, ಕಾರಿನಲ್ಲಿ ಕರೆದೊಯ್ದು ಉಮೇದುವಾರಿಕೆ ಸಲ್ಲಿಸಿದ್ದಾರೆ.
ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನ ಇದಾಗಿದ್ದು, ಇವರಿಗೆ ಕ್ಯಾಮೆರಾ ಚಿಹ್ನೆ ಲಭಿಸಿದೆ. ಅವಿವಾಹಿತ ಅಂಕ ನಾಯಕ ಅಂಗವಿಕಲರಾಗಿದ್ದು, ಗ್ರಾಮದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆಗಾಗ್ಗೆ ಊರಿನವರು ಊಟ, ಹಣ ಕೊಡುತ್ತಿರುತ್ತಾರೆ. ಸುತ್ತಮುತ್ತಲಿನ ಹೋಟೆಲ್ ಹಾಗೂ ಕೆಲ ಮನೆಗಳಿಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿರುತ್ತಾರೆ.
5 ವರ್ಷಗಳಿಂದ ಗ್ರಾಮದ ಚರಂಡಿ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಆದರೆ, ಪ್ರತಿ ಬಾರಿ ಚುನಾವಣೆ ಬಂದಾಗ ಹಣ ಖರ್ಚು ಮಾಡಿ ಗೆಲ್ಲುತ್ತಾರೆ.ಚುನಾವಣೆಯಲ್ಲಿ ಹಣವಿಲ್ಲದ ವ್ಯಕ್ತಿಯೂ ಗೆಲ್ಲಬೇಕು. ಹೀಗಾಗಿ, ಈ ವ್ಯಕ್ತಿಯನ್ನು ಕಣಕ್ಕಿಳಿಸಿದ್ದೇವೆ’ ಎಂದು ಗ್ರಾಮದ ಯುವಕರು ಹೇಳುತ್ತಾರೆ.
You must be logged in to post a comment Login