BANTWAL
ಕುಡಿದು ಬಂದ ಗಂಡನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಹೆಂಡತಿ
ಬಂಟ್ವಾಳ ಮಾರ್ಚ್ 6 : ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಗಂಡನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿರುವ ಘಟನೆಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರ ಗ್ರಾಮದಲ್ಲಿ ನಡೆದಿದೆ. ನಾವೂರ ಸೂರ ಕ್ವಾರ್ಟರ್ಸ್ ನಿವಾಸಿ ಸೇಸಪ್ಪ ಪೂಜಾರಿ(60) ಕೊಲೆಯಾದವರು. ಕೊಲೆ ಆರೋಪದಡಿ ಸೇಸಪ್ಪ ಅವರ ಪತ್ನಿ ಉಮಾವತಿ (52)ಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸೇಸಪ್ಪ ಕೂಲಿ ಕೆಲಸ ಮಾಡುತ್ತಿದ್ದರು. ಮದ್ಯಪಾನಿಯಾಗಿದ್ದ ಪತಿ-ಪತ್ನಿ ಮಧ್ಯೆ ದಿನ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಮಾರ್ಚ್ 3ರಂದು ರಾತ್ರಿ ಎಂದಿನಂತೆ ಪತಿ ಸೇಸಪ್ಪ ಪೂಜಾರಿ(60) ಕುಡಿದು ಬಂದು ಪತ್ನಿಗೆ ಹಲ್ಲೆ ನಡೆಸಿದಾಗ ಇವರ ನಡುವೆ ಪರಸ್ಪರ ಹೊಡೆದಾಟ ನಡೆದಿತ್ತು. ಇದೇ ವೇಳೆ ಉಮಾವತಿ ಅವರು ಪತಿಯ ಹಣೆಗೆ ಕತ್ತಿಯಿಂದ ಕಡಿದಿದ್ದು, ಇದಕ್ಕೆ ಔಷಧಿ ಮಾಡಿರಲಿಲ್ಲ.
ಇದರಿಂದಾಗಿ ಮನೆಯಲ್ಲೆ ತೀವ್ರ ರಕ್ತಸ್ರಾವಗೊಂಡು ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮೖತರ ಪುತ್ರಿ ನಯನ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿ ಮಹಿಳೆಯನ್ನು ಶನಿವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login