ಬಂಟ್ವಾಳ ಜೂನ್ 19: ಧಾರುಣ ಘಟನೆಯೊಂದರಲ್ಲಿ ಸೀಮಂತಕ್ಕೆ ದಿನ ನಿಗದಿಯಾಗಿದ್ದ ತುಂಬು ಗರ್ಭಿಣಿ ಮತ್ತು ಆಕೆಯ ಪತಿಯ ಮೃತದೇಹ ಮನೆಯೊಂದರಲ್ಲಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ನಾವೂರು ಬಡಗುಂಡಿಯಲ್ಲಿ ನಡೆದಿದೆ.

ಮೃತರನ್ನು ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಪತ್ನಿ ಜಯಂತಿ ಎಂದು ಗುರುತಿಸಲಾಗಿದೆ. ತಿಮ್ಮಪ್ಪ ಮೂಲ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಕುತ್ತಿಗೆ ಭಾಗದಲ್ಲಿ ಗಾಯಗಳಿವೆ ಎನ್ನಲಾಗಿದೆ.

ತಿಮ್ಮಪ್ಪ ಅವರ ಮನೆ ಮಿತ್ತಮಜಲಿನಲ್ಲಿದ್ದು, ಪತ್ನಿಯ ಮನೆ ಬಡಗುಂಡಿಯಲ್ಲಿದೆ. ಇವರಿಗೆ ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದು, ಈವರೆಗೆ ಮಕ್ಕಳಾಗಿರಲಿಲ್ಲ. ಪ್ರಸ್ತುತ ಪತ್ನಿ ಗರ್ಭಿಣಿಯಾಗಿದ್ದು, ಸೀಮಂತದ ದಿನಾಂಕವೂ ನಿಗದಿಯಾಗಿತ್ತು ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.