ಮಂಗಳೂರು ಜನವರಿ 08: ಕಳೆದ ವರ್ಷ ತೋಟ ಬೆಂಗ್ರೆಯ ಕಡಲ ತೀರದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿದ್ದಾಗ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾದ ಪ್ರಜೀತ್ ಎಂ.ಕರ್ಕೇರ ಬಿನ್ ಮಿಥುನ್, ಸ್ಯಾಂಡ್ಸ್ ಫಿಟ್, ಬೆಂಗ್ರೆ ರವರ ಕುಟುಂಬಕ್ಕೆ ಕರ್ನಾಟಕ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಯೋಜನೆಯಡಿ ರೂ. 8,00,000/- (ರೂಪಾಯಿ ಎಂಟು ಲಕ್ಷ) ಮೊತ್ತದ ಚೆಕ್ ಶಾಸಕ ವೇದವ್ಯಾಸ್ ಕಾಮತ್ ರವರು ಹಸ್ತಾಂತರಿಸಿದರು.


ಆಕಸ್ಮಿಕವಾಗಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದ ಪ್ರಜೀತ್ ರವರನ್ನು ರಕ್ಷಿಸಲು ಅಲ್ಲೇ ಇದ್ದ ಶಿವಾನಂದ ಮತ್ತು ಅವಿನಾಶ್ ಎಂಬ ಮೀನುಗಾರರು ಜೀವದ ಹಂಗು ತೊರೆದು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ನಂತರದ ದಿನಗಳಲ್ಲಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಶಾಸಕರು ಸರ್ಕಾರದಿಂದ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ಲಭಿಸುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.

ಅದರಂತೆ ನೊಂದ ಕುಟುಂಬಕ್ಕೆ ಪರಿಹಾರ ಧನ ಮಂಜೂರು ಮಾಡುವ ಕುರಿತು ಮಂಗಳೂರಿನ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ (ಪ್ರಭಾರ) ಶ್ರೀ ದಿಲೀಪ್ ಕುಮಾರ್ ರವರು ಸರ್ಕಾರಕ್ಕೆ ಸೂಕ್ತ ದಾಖಲೆಗಳ ಸಹಿತ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಇದೀಗ ಪರಿಹಾರ ಮೊತ್ತ ವಿತರಣೆಯಾಗಿದೆ.

Share Information