Connect with us

    MANGALORE

    ಮಂಗಳೂರು : ಅಕ್ಷಯ ಆರ್.ಶೆಟ್ಟಿಯವರ ನಾಟಕ, ಕವನ ಸಂಕಲನಗಳ ಲೋಕಾರ್ಪಣೆ

    ನಾಟಕ, ಕಾದಂಬರಿಗಳ ಮೂಲಕ ತುಳು ಸಂಸ್ಕೃತಿಯ ಶೋಧನೆಯಾಗುವ ಜೊತೆಗೆ ವರ್ತಮಾನದಲ್ಲಿ ಇತಿಹಾಸವನ್ನು ಕಟ್ಟಿಕೊಡುವ ಕೆಲಸ ಸಾಧ್ಯವಾಗುತ್ತದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟಿದ್ದಾರೆ.

    ಮಂಗಳೂರು:  ನಾಟಕ, ಕಾದಂಬರಿಗಳ ಮೂಲಕ ತುಳು ಸಂಸ್ಕೃತಿಯ ಶೋಧನೆಯಾಗುವ ಜೊತೆಗೆ ವರ್ತಮಾನದಲ್ಲಿ ಇತಿಹಾಸವನ್ನು ಕಟ್ಟಿಕೊಡುವ ಕೆಲಸ ಸಾಧ್ಯವಾಗುತ್ತದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಪ್ರೆಸ್‌ಕ್ಲಬ್‌ನಲ್ಲಿ ಅಡ್ಯಾರ್‌ನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅಕ್ಷಯ ಆರ್. ಶೆಟ್ಟಿ ಅವರ ‘ಪೆರ್ಗ’ ತುಳು ನಾಟಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

    ತುಳು ಸಾಹಿತ್ಯ ಕ್ಷೇತ್ರದಲ್ಲಿ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿಗಳಿಗಿಂತಲೂ ತುಳು ನಾಟಕ ಕೃತಿಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಳ್ಳುವ ಮೂಲಕ ಅಪಾರ ಕೊಡುಗೆಯನ್ನು ನೀಡಿವೆ.

    ತುಳುವಿನಲ್ಲಿ 5000ಕ್ಕೂ ಅಧಿಕ ನಾಟಕಗಳು ರಚನೆಯಾಗಿದ್ದು, ಸುಮಾರು 1000ದಷ್ಟು ನಾಟಕ ಕೃತಿಗಳು ಪ್ರಕಟಗೊಂಡಿವೆ.

    400ರಷ್ಟು ಕವನ ಸಂಕಲನ, 200ರಷ್ಟು ಕಥಾ ಸಂಕಲನ ಹಾಗೂ 75 ಕಾದಂಬರಿಗಳು ತುಳುವಿನಲ್ಲಿ ಪ್ರಕಟ ಆಗಿವೆ.

    ರತ್ನವರ್ಮ ಹೆಗ್ಗಡೆ ಹಾಗೂ ಎಸ್.ವಿ. ಪಣಿಯಾಡಿ ಅವರಿಂದ ತುಳು ನಾಟಕ ಕೃತಿಗಳಿಗೆ ಮನ್ನಣೆ ಸಿಗುತ್ತಿರುವ ಕಾರಣ ತುಳು ಸಂಸ್ಕೃತಿಯು ಅನಾವರಣಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ ಅವರು, ‘ಪೆರ್ಗ’ ನಾಟಕ ಕೃತಿಯ ಮೂಲಕ ಲೇಖಕಿ ಪ್ರಕೃತಿ ಮತ್ತು ತುಳುನಾಡಿನ ಆರಾಧನೆಯ ಮಹತ್ವವನ್ನು ಸಾರುವ ಕಾರ್ಯ ಮಾಡಿದ್ದಾರೆ ಎಂದರು.

    ‘ಹಿಡಿ ಅಕ್ಕಿಯ ಧ್ಯಾನ’ ಕನ್ನಡ ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಪ್ರತಿಕ್ರಿಯಿಸಿ, ಸೃಜನಶೀಲ ಸಾಹಿತ್ಯವು ತನ್ನದೇ ಆದ ಭಾವವನ್ನು ಕಟ್ಟಿಕೊಡುವ ಧ್ಯಾನದ ಸಾಹಿತ್ಯವಾಗುವುದು ಬಹು ಮುಖ್ಯ. ನಮ್ಮಲ್ಲಿ ಕವಿತೆಗಳಿಗೆ ಕೊರತೆ ಇಲ್ಲ.

    ಆದರೆ ಧ್ಯಾನದಲ್ಲಿ ಅರಳುವ ಕವಿತೆಗಳು ವಿರಳವಾಗುತ್ತಿರುವ ಸಂದರ್ಭದಲ್ಲಿ ಅಕ್ಷಯ ಅವರ ಕವನಗಳು ಗಮನ ಸೆಳೆಯುತ್ತವೆ ಎಂದರು.

    ಆಕೃತಿ ಆಶಯ ಪಬ್ಲಿಕೇಶನ್‌ನ ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು. ಕೃತಿಕಾರರಾದ ಅಕ್ಷಯ ಆರ್. ಶೆಟ್ಟಿ ಸ್ವಾಗತಿಸಿದರು. ನರೇಶ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply