LATEST NEWS
ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಹುಚ್ಚು ನಾಯಿ ದಾಳಿ; ಒಂದೇ ಗಂಟೆಯಲ್ಲಿ 17 ಜನರಿಗೆ ಕಚ್ಚಿಗಾಯ..!
ಉತ್ತರ ಪ್ರದೇಶ, ಆಗಸ್ಟ್ 17 : ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಹುಚ್ಚು ನಾಯಿಯೊಂದು ಒಂದು ಗಂಟೆಯೊಳಗೆ ಮಕ್ಕಳು , ಮಹಿಳೆಯರು ಸೇರಿ 17 ಜನರನ್ನು ಕಚ್ಚಿ ಗಾಯಗೊಳಿಸಿದ ಘಟನೆ ನಡೆದಿದೆ.
ಗೋರಖ್ಪುರದ ಶಾಹ್ಪುರದಲ್ಲಿರುವ ತನ್ನ ಮನೆಯ ಹೊರಗೆ ಫೋನ್ ಮಾತನಾಡುತ್ತಿದ್ದ 22 ವರ್ಷದ ವಿದ್ಯಾರ್ಥಿಯ ಮೇಲೆ ಈ ಹುಚ್ಚು ನಾಯಿ ದಾಳಿ ಮಾಡಿ ಯದ್ವಾ ತದ್ವಾ ಕಚ್ಚಿ ಹಾಕುತ್ತಿದ್ದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಶಿಷ್ ಯಾದವ್ ಎಂಬ ಬಿಬಿಎ ವಿದ್ಯಾರ್ಥಿ ಮನೆಯ ಮುಂಭಾಗದಲ್ಲಿ ಫೋನ್ ಮಾತನಾಡುತ್ತಿದ್ದ ಆತನ ಮೇಲೆ ಏಕಾಏಕಿ ನಾಯಿ ದಾಳಿ ಮಾಡಿದೆ. ಹಲ್ಲು ತೋರಿಸುತ್ತಾ ಆತನತ್ತ ಧಾವಿಸಿದ ಬೀದಿ ನಾಯಿ ಆತನ ಮೇಲೆ ಸರಣಿ ದಾಳಿ ಮಾಡಿದೆ. ಆಶಿಷ್ ಹಿಂದಕ್ಕೆ ಸರಿಯಲು ಮತ್ತು ನಾಯಿಯನ್ನು ತಳ್ಳಲು ಪ್ರಯತ್ನಿಸುತ್ತಾನೆ ಆದರೂ ನಾಯಿ ಬೊಗಳುವುದನ್ನು ಮತ್ತು ಕಚ್ಚುವುದನ್ನು ನಿಲ್ಲಿಸುವ ಲಕ್ಷಣ ತೋರುವುದಿಲ್ಲ. ಆಶಿಷ್ ನೆಲಕ್ಕೆ ಬಿದ್ದಾಗ ನಾಯಿ ಅವನ ಕಾಲಿಗೂ ಕಚ್ಚುತ್ತದೆ. ನಂತರ ಜಿಗಿದು ಆತನ ಮುಖಕ್ಕೆ ಕಚ್ಚಿ ಓಡಿಹೋಗುತ್ತದೆ. ವೀಡಿಯೋದಲ್ಲಿ ಆತನ ಬಾಯಿ, ಕಣ್ಣು ಮತ್ತು ತುಟಿಯಿಂದ ರಕ್ತ ಹರಿಯುವುದು ಕಂಡುಬರುತ್ತದೆ.
ಇದಾದ ನಂತರ ಮನೆಗೆ ವಾಪಸ್ ಬರುತ್ತಿದ್ದ ಮತ್ತು ಮನೆಯ ಬಾಗಿಲ ಬಳಿ ನಿಂತಿದ್ದ ಮಹಿಳೆಯ ಮೇಲೆ ಕೂಡ ನಾಯಿ ದಾಳಿ ಮಾಡಿದೆ. ಅವಳ ಮೊಣಕಾಲು ಮತ್ತು ಕಾಲಿಗೆ ಕಚ್ಚಿದ ನಂತರ ನಾಯಿ ಓಡಿಹೋಗಿದೆ ಎಂದು ಆಕೆ ಹೇಳಿದ್ದಾರೆ. ಅವಳ ಮೊಣಕಾಲಿನ ಆಳವಾದ ಗಾಯಕ್ಕೆ ಹಲವು ಹೊಲಿಗೆ ಹಾಕಲಾಗಿದೆ. ಆಶಿಷ್ ಅವರ ತಂದೆ ವಿಜಯ್ ಯಾದವ್ ಅವರು ರೇಬೀಸ್ ಲಸಿಕೆ ಹಾಕಿಸಲು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ಲಸಿಕೆ ಖಾಲಿಯಾಗಿದೆ ಎಂದು ಹೇಳಲಾಗಿದೆ. ಹುಚ್ಚು ನಾಯಿ ದಾಳಿಯ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
You must be logged in to post a comment Login