DAKSHINA KANNADA
ಅಕ್ಟೋಬರ್ 7 ರಿಂದ ಕುಮಾರಪರ್ವತ ಚಾರಣಕ್ಕೆ ಅವಕಾಶ
ಸುಬ್ರಹ್ಮಣ್ಯ ಅಕ್ಟೋಬರ್ 07: ಕುಮಾರಪರ್ವತ ಚಾರಣಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಅಕ್ಟೋಬರ್ 07 ರಿಂದ ಅವಕಾಶ ಕಲ್ಪಿಸಲಾಗಿದೆ.
ಬೇಸಿಗೆ ಹಾಗೂ ಮಳೆಯ ಕಾರಣದಿಂದಾಗಿ ಮೇ ತಿಂಗಳಿನಿಂದ ಸೆಪ್ಟೆಂಬರ್ 29 ರವರೆಗೆ ಕುಮಾರ ಪರ್ವತ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸೆಪ್ಟೆಂಬರ್ 30ರಿಂದ ಚಾರಣ ಆರಂಭಗೊಂಡಿತ್ತು, ಆದರೆ ಮತ್ತೆ ಮಳೆ ಆರಂಭವಾದ ಹಿನ್ನಲೆ ಅಕ್ಟೋಬರ್ 3 ರಿಂದ ನಿರ್ಬಂಧ ವಿಧಿಸಲಾಗಿತ್ತು.
ಇದೀಗ ಮಳೆ ಕಡಿಮೆಯಾಗಿದ್ದು ಅರಣ್ಯ ಇಲಾಖೆ ಇದೀಗ ಮತ್ತೆ ಚಾರಣಕ್ಕೆ ಅವಕಾಶ ಕಲ್ಪಿಸಿದೆ. ಚಾರಣ ಆರಂಭಗೊಂಡಿರುವುದರಿಂದ ಪರ್ವತದ ದಾರಿಯಲ್ಲಿ ಮತ್ತು ಪರ್ವತದಲ್ಲಿ ಸ್ವಚ್ಛತೆ ಕಾಪಾಡಲು ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದೆ. ಕುಮಾರಪರ್ವತ, ಗಿರಿಗದ್ದೆ, ಕಲ್ಲಚಪ್ಪರ ಸೇರಿದಂತೆ ವಿವಿಧೆಡೆ ಸೂಚನಾ ಫಲಕ ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿ, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ವಸ್ತುಗಳನ್ನು ಕೊಂಡೊಯ್ಯದಂತೆ ನಿರ್ಬಂಧ ವಿಧಿಸಲಾಗಿದೆ.
ಸುಬ್ರಹ್ಮಣ್ಯದಿಂದ ಸುಮಾರು 13 ಕಿ.ಮೀ. ಕಾಡು, ಬೆಟ್ಟಗಳಲ್ಲಿ ಚಾರಣ ನಡೆಸಿ ಕುಮಾರಪರ್ವತದ ತುದಿ ಏರಬಹುದು. ಸುಮಾರು 5 ಕಿ.ಮೀ. ಕ್ರಮಿಸಿದಾಗ ಗಿರಿಗದ್ದೆ ಎಂಬಲ್ಲಿ ಜೋಯಿಸರ ಮನೆ ಇದ್ದು, ಚಾರಣಿಗರಿಗೆ ಊಟ, ಉಪಾಹಾರ, ನೀರು ಲಭ್ಯ. ಕುಮಾರಪರ್ವತವನ್ನು ಸುಬ್ರಹ್ಮಣ್ಯದಿಂದ ಏರಲು ಹೊರಟರೆ ಲೆಂಕಿರಿಗುಡ್ಡ, ಗಿರಿಗದ್ದೆ, ಅರಣ್ಯ ಇಲಾಖೆ ಚೆಕ್ಪೋಸ್ಟ್, ಕಲ್ಲುಚಪ್ಪರ, ಶೇಷಪರ್ವತ, ಭತ್ತದ ರಾಶಿ, ಸಿದ್ಧ ಪರ್ವತ ದಾಟಿ ಹೋಗಬೇಕು ಎಂದು ಮೂಲಗಳು ತಿಳಿಸಿವೆ.
You must be logged in to post a comment Login