Connect with us

    LATEST NEWS

    ಕಾಪು – ಖಾಸಗಿ ಬಸ್ ನವರಿಗೆ ಬುದ್ದಿಕಲಿಸಲು ಸ್ವತಃ ಪೀಲ್ಡ್ ಗೆ ಇಳಿದ ತಹಸೀಲ್ದಾರ್ ಪ್ರತಿಭಾ

    ಉಡುಪಿ ಫೆಬ್ರವರಿ 10: ಕಾಪುವಿನ ಬಂಗ್ಲೆ ಮೈದಾನ ಬಳಿಯಿರುವ ನೂತನ ಆಡಳಿತಸೌಧಕ್ಕೆ ಬರುವ ಜನರಿಗೆ ಅಲ್ಲಿ ಎಲ್ಲಾ ಬಸ್ ಗಳಿ ನಿಲುಗಡೆ ನೀಡಬೇಕೆಂಬ ಆರ್ ಟಿಓ ಸೂಚನೆ ಇದ್ದರೂ ಕ್ಯಾರೆ ಮಾಡದೆ ಇದ್ದ ಬಸ್ ಚಾಲಕರಿಗೆ ಬಿಸಿ ಮುಟ್ಟಿಸಲು ಸ್ವತಃ ತಹಸೀಲ್ದಾರ್ ಪ್ರತಿಭಾ ಅವರು ಬಸ್ ನಲ್ಲಿ ಶುಕ್ರವಾರ ಖುದ್ದು ಆಗಮಿಸಿ ಆಡಳಿತ ಸೌಧ ಮುಂಬಾಗ ಬಸ್ ನಿಲುಗಡೆ ಪಡೆದು ಕಚೇರಿ ತಲುಪಿದರು.


    ಕಾಪು ನೂತನ ಆಡಳಿತ ಸೌಧದಲ್ಲಿ ಶಾಸಕರ ಕಚೇರಿ, ತಾಲೂಕು ಕಚೇರಿ, ತಾಲೂಕು ಪಂಚಾಯಿತಿ ಕಚೇರಿ, ಉಪಖಜಾನಾಧಿಕಾರಿಗಳ ಕಚೇರಿ, ಆಹಾರ ಶಾಖೆ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ನಿಲುಗಡೆಗೆ ನಿರ್ದೇಶನ ನೀಡುವಂತೆ ಕಾಪು ತಹಸೀಲ್ದಾರ್ ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೋರಿದ್ದರು. ಅದರಂತೆ ಸಾರಿಗೆ ಅಧಿಕಾರಿ ಬಸ್ ನಿಲುಗಡೆ ಮಾಡುವಂತೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲಾ ಕೆನರಾ ಬಸ್ ಮಾಲೀಕರ ಸಂಘ, ಕರಾವಳಿ ಬಸ್ ಮಾಲೀಕರ ಸಂಘ ಹಾಗೂ ಶಿರ್ವ ಬಸ್ ಮಾಲೀಕರ ಸಂಘಕ್ಕೆ 2023 ನವೆಂಬರ್ 3ರಂದು ಸೂಚನೆ ನೀಡಿದ್ದರು. ಆದರೆ ಆ ಬಳಿಕ ಯಾವೊಂದು ಬಸ್‌ಗಳು ನಿಲುಗಡೆ ಮಾಡದೆ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದನ್ನು ತಹಸೀಲ್ದಾರ್ ಗಮನಕ್ಕೆ ತರಲಾಗಿತ್ತು.

    ಪ್ರತಿನಿತ್ಯ ಬಸ್‌ನಲ್ಲಿ ಬರುವ ಕಚೇರಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಸ್‌ಗಳವರೊಡನೆ ವಾಗ್ವಾದ ನಡೆಸುವ ಪರಿಸ್ಥಿತಿ ಇತ್ತು. ಇದನ್ನು ತಿಳಿದ ತಹಸೀಲ್ದಾರ್ ಶುಕ್ರವಾರ ಉಡುಪಿಯಿಂದ ಖುದ್ದಾಗಿ ಕಾಪುವಿಗೆ ಬಸ್‌ನಲ್ಲಿ ಆಗಮಿಸಿದ್ದರು. ತಹಸೀಲ್ದಾರ್ ನಿರ್ವಾಹಕರಲ್ಲಿ ಹಲವು ಬಾರಿ ಕೇಳಿಕೊಂಡ ಬಳಿಕ ಆಡಳಿತ ಸೌಧ ಮುಂಭಾಗ ನಿಲುಗಡೆ ನೀಡಿದ್ದಾರೆ. ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬಸ್‌ಗಳನ್ನುನಿಲುಗಡೆ ಮಾಡುವಂತೆ ಸಾರಿಗೆ ಅಧಿಕಾರಿ ಕಟ್ಟು ನಿಟ್ಟಿನ ಕ್ರಮವಹಿಸಬೇಕು ಎಂದು ತಹಸೀಲ್ದಾರ್ ಸೂಚಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply