FILM
ನಾಳೆ ನಿನ್ನ ಅಹಂಕಾರ ಮುರೀತೀನಿ ಸಿಎಂ ಠಾಕ್ರೆಗೆ ಕಂಗನಾ ಚಾಲೆಂಜ್
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಮನೆ ಮತ್ತು ಕಚೇರಿ ನೆಲಸಮ ಮಾಡಿರುವ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ಪ್ರಹಾರ ನಡೆಸಿದ್ದಾರೆ.
ಈ ಕುರಿತು ವಿಡಿಯೋ ಮಾಡಿರುವ ಅವರು, ‘ಸಿನಿಮಾ ಮಾಫಿಯಾ ಜತೆಗೆ ಸೇರಿಕೊಂಡು ನನ್ನ ಮೇಲೆ ಸೇಡು ತೀರಿಸಿಕಂಡೆ ಎಂದು ನಿಮಗೆ ಖುಷಿಯಾಗಿರಬಹುದು. ಇವತ್ತು ನನ್ನ ಮನೆ ಮುರಿದಿದೆ. ನಾಳೆ ನಿನ್ನ ಅಹಂಕಾರ ಮುರಿಯತ್ತೆ, ಸಮಯ ಖಂಡಿತಾ ಒಂದೇ ತರಹ ಇರುವುದಿಲ್ಲ’ ಎಂದು ಕಂಗನಾ ಹೇಳಿದ್ದಾರೆ.
ಕಾಶ್ಮೀರಿ ಪಂಡಿತರ ಕುರಿತಾಗಿ ಚಿತ್ರ ಮಾಡುವುದಾಗಿ ಹೇಳಿರುವ ಅವರು, ‘ಕಾಶ್ಮೀರಿ ಪಂಡಿತರಿಗೆ ಏನಾಯ್ತು ಎಂಬುದು ನನಗೆ ಗೊತ್ತಿದೆ. ಈಗ ಸ್ವತಃ ಅನುಭವವಾಗಿದೆ. ಈ ಹಿಂದೆ ಅಯೋಧ್ಯೆ ಬಗ್ಗೆ ಚಿತ್ರ ಮಾಡುವುದಾಗಿ ಹೇಳಿದ್ದೆ. ಈಗ ಕಾಶ್ಮೀರ ಕುರಿತಾಗಿಯೂ ಸಿನಿಮಾ ಮಾಡ್ತೀನಿ ಎಂದು ಈ ಸಂದರ್ಭದಲ್ಲಿ ಪ್ರಮಾಣ ಮಾಡುತ್ತೀನಿ’ ಎಂದು ಕಂಗನಾ ಎಚ್ಚರಿಸಿದ್ದಾರೆ.
ಇದಕ್ಕೂ ಮುನ್ನ ಮುಂಬೈ ನಗರ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವಾಗುತ್ತಿದೆ ಮತ್ತು ಈ ಶಹರದಲ್ಲಿ ಭದ್ರತೆ ಇಲ್ಲ ಎಂದು ಕಂಗನಾ ಆರೋಪಿಸಿದ್ದರು. ಈ ವಿಷಯವಾಗಿ ಸಿಟ್ಟಾಗಿದ್ದ ಶಿವಸೇನೆ ಮುಖಂಡ ಸಂಜಯ್ ರಾವತ್, ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಬೇಡಿ ಎಂದಿದ್ದರು. ಅದಾದ ಮೇಲೆ ಕಂಗನಾ, ಮುಂಬೈಯಲ್ಲಿರುವ ತಮ್ಮ ಕಚೇರಿಯನ್ನು ಅತಿಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಇಂದು ಅನಧಿಕೃತವಾಗಿ ಕಟ್ಟಿದ್ದ ಭಾಗಗಳನ್ನು ಒಡೆದು ಹಾಕಿದ್ದರು.
https://twitter.com/KanganaTeam/status/1303636961131782147
ಅದಕ್ಕೆ ಪ್ರತಿಯಾಗಿ ಮಾತನಾಡಿರುವ ಕಂಗನಾ, ಈಗ ನೇರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೇ ಅವಾಜ್ ಹಾಕಿದ್ದಾರೆ.
You must be logged in to post a comment Login