Connect with us

LATEST NEWS

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ; ಕರಾವಳಿಯಲ್ಲಿ ಭಾರಿ ನಷ್ಟ. ಹೈ ಅಲಾರ್ಟ್

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ; ಕರಾವಳಿಯಲ್ಲಿ ಭಾರಿ ನಷ್ಟ ಹೈ ಅಲಾರ್ಟ್

ಮಂಗಳೂರು, ಅಕ್ಟೋಬ್ 05 :  ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ನಿನ್ನೆ ಸುರಿದ ಭಾರಿ ಗಾಳಿ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ಹಲವೆಡೆ ಅಪಾರ ಹಾನಿಯಾಗಿದೆ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನಲ್ಲಿ ಸಿಡಿಲಾಘಾತಕ್ಕೆ ನಾಲ್ವರು ಗಾಯಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ , ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕುಕ್ಕೆ ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ನಗರ ಸೇರಿದಂತೆ ಕರಾವಳಿಯಾದ್ಯಂತ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಗಾಳಿ ಸಿಡಿಲಿನೊಂದಿಗೆ ಭಾರಿ ಮಳೆಯಾಗಿದೆ.
ಅರಬ್ಬೀ ಸಮುದ್ರದ ಆಗ್ನೇಯ ದಿಕ್ಕಿನಲ್ಲಿ ಅ.5ರಿಂದ ಭಾರೀ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಇದರ ಹಿನ್ನೆಲೆಯಲ್ಲಿ ಕರಾವಳಿ ತೀರದಲ್ಲಿ ಮುಂಜಾಗ್ರತಾ ನಿರ್ದೇಶನ ನೀಡಲಾಗಿದೆ. ಅ.7ರಂದು ಭಾರೀ ಮಳೆಯಾಗುವುದಾಗಿಯೂ, ಮುಂಜಾಗ್ರತೆಯ ಸಲುವಾಗಿ ರಾಜ್ಯದ ವಿವಿಧ ಇಲಾಖೆ ಮೂಲಕ ಜಾಗ್ರತಾ ನಿರ್ದೇಶ ನೀಡಲಾಗಿದೆ
ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯು ಭಾರ ಕುಸಿತ ಉಂಟಾಗಿ ಚಂಡಮಾರುತ ಪರಿವರ್ತನೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅ. 10 ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಹಾಗೂ ಈಗಾಗಲೇ ತೆರಳಿರುವವರು ಕೂಡಲೇ ಹಿಂತಿರುಗುವಂತೆ ಹವಾಮಾನ ಇಲಾಖೆ ಆಧರಿಸಿ ಉಭಯ ಜಿಲ್ಲಾಡಳಿತಗಳು ಸ್ಪಷ್ಟ ಸೂಚನೆಯನ್ನು ಧ್ವನಿ ವರ್ಧಕಗಳ ಮೂಲಕ ನೀಡಿವೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಕೇರಳ ಹಾಗೂ ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿದ್ದು ಸಮುದ್ರ ಅಲೆಗಳು ಪ್ರಕ್ಷುಬ್ಧವಾಗಿವೆ.ಅರಬ್ಬಿ ಸಮುದ್ರವು ಪ್ರಕ್ಷ ಬ್ಧವಾಗಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ದಡಕ್ಕೆ ವಾಪಸಾಗಲು ಸೂಚನೆ ನೀಡಿದೆ. ಬಂಟ್ವಾಳ ಪರಿಸರದಲ್ಲಿ ಸುರಿದ ಮಳೆಯೊಂದಿಗೆ ಬಡಿದ ಸಿಡಿಲು, ಗುಡುಗಿನ ಶಬ್ದಕ್ಕೆ ಆಧಿಘಾತಕ್ಕೀಡಾಗಿ ನಾವೂರು ಮತ್ತು ದೇವಸ್ಯ ಪಡೂರು ಗ್ರಾಮದ ಒಟ್ಟು ನಾಲ್ವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದರು. ನಾವೂರು ಪಟ್ಲ ಗ್ರಾಮದ ಅನ್ನತ್‌ ಬಾನು, ಸಾಹಿರಾ ಕಾಲೇಜಿನಿಂದ ಮರಳುವ ಸಂದರ್ಭ ಸಿಡಿಲಿನ ಅಬ್ಬರಕ್ಕೆ ಆಘಾತಕ್ಕೀಡಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಯಪಡೂರು ಗ್ರಾಮದ ಐಸಮ್ಮ ಮತ್ತು ಆಸ್ಯಮ್ಮ ಮನೆಯಲ್ಲಿದ್ದಾಗ ಸಿಡಿಲಬ್ಬರಕ್ಕೆ ಆಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಮಿನಿ ವಿಧಾನಸೌಧದಲ್ಲಿರುವ ಕೊಠಡಿ ಸಂಖ್ಯೆ 5ರಲ್ಲಿರುವ ಬ್ಯಾಟರಿ ಸಿಡಿಲಿಗೆ ಸ್ಫೋಟಗೊಂಡಿದ್ದು, ಈ ಸಂದರ್ಭ ಸ್ಥಳದಲ್ಲಿದ್ದ ಸಾರ್ವಜನಿಕರು, ಸಿಬ್ಬಂದಿ ಆತಂಕಕ್ಕೆ ಒಳಗಾದರು.

ಅದೃಷ್ಟವಶಾತ್‌ ಯಾರಿಗೂ ಗಾಯ ಸಂಭವಿಸಿಲ್ಲ. ಇದೇ ವೇಳೆ ತಾಲೂಕಿನ ಹಲವೆಡೆ ಸಿಡಿಲು, ಗುಡುಗಿನಿಂದಾಗಿ ಕೆಲವೆಡೆ ಹಾನಿ ಉಂಟಾಗಿದೆ. ಸುಮಾರು 1.2 ಲಕ್ಷ ರೂ ಸೊತ್ತುಗಳು ನಷ್ಟವಾಗಿವೆ.

ಪೆರಾಜೆ ಗ್ರಾಮದ ಮನೆಯೊಂದಕ್ಕೆ ರೆಂಬೆ ಬಿದ್ದು ಚಾವಣಿ ಜಖಂ ಆಗಿದ್ದು, ಕುಳ ಗ್ರಾಮದ ಮನೆ, ಕೊಟ್ಟಿಗೆ ಕುಸಿದು ಹಾನಿಯಾಗಿದೆ. ತುಂಬೆ ಸರಕಾರಿ ಹಿ.ಪ್ರ.ಶಾಲೆಯ ಶೀಟ್‌ ಹಾರಿ ಹೋಗಿದೆ. ಗುರುವಾರದ ಸಿಡಿಲಿಗೂ ಹಲವೆಡೆ ವಿದ್ಯುತ್‌ ವಯರಿಂಗ್‌ ಗಳು ಸುಟ್ಟು ಹೋಗಿರುವ ಬಗ್ಗೆ ಮಾಹಿತಿಗಳು ಲಭಿಸಿವೆ.
ಮುಂದಿನ 24 ಗಂಟೆಗಳಳ್ಲಿ ಭಾರಿ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದ ಹಿನ್ನೆಲೆಯಲ್ಲಿ ಸಮುದ್ರದ ಬದಿಯಲ್ಲಿರುವವರನ್ನು ಸ್ಥಳಾಂತರಿಸಲು ಕರಾವಳಿ ತಟರಕ್ಷಣಾ ಪಡೆ ಸೂಚನೆ ನೀಡಿದೆ.


ಕಾಸರಗೋಡು ಜಿಲ್ಲೆಯಲ್ಲಿ 24ಗಂಟೆಗಳ ಕಾಲ ಕಾರ್ಯಾಚರಿಸುವ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ನಿಯಂತ್ರಣ ಕೊಠಡಿ ಸಂಪರ್ಕ ನಂಬ್ರ: 04994-257700, 9446601700 ಇದಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *