BANTWAL
ತುಂಬೆ ಡ್ಯಾಂನಿಂದ ಅಪಾರ ಕೃಷಿ ಭೂಮಿ ಹಾನಿ, ಡಿ.26 ರಂದು ಡ್ಯಾಂ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲು ರೈತ ಸಂಘ ನಿರ್ಧಾರ..!

ಬಂಟ್ವಾಳ: ಮಂಗಳೂರು ಮಹಾ ಜನತೆಗೆ ಕುಡಿಯುವ ನೀರಿನ ಪೂರೈಕೆಯ ದೃಷ್ಟಿಯಿಂದ ನಿರ್ಮಾಣವಾದ ತುಂಬೆ ಡ್ಯಾಂ ನಿಂದ ಸುಮಾರು ಎಕರೆಗಳಷ್ಟು ಕೃಷಿ ಭೂಮಿ ನೀರಿನಿಂದ ಕೊಚ್ಚಿಕೊಂಡು ಹೋಗಿದ್ದು, ಸರಕಾರವಾಗಲಿ ಜಿಲ್ಲಾಡಳಿತವಾಗಲಿ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದ ರೈತ ಸಂಘದ ಅವರು ಡಿ.26 ರಂದು ಡ್ಯಾಂ ನ ಕಛೇರಿಗೆ ಬೀಗ ಜಡಿದು ಅಹೋರಾತ್ರಿ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿ ತಿಳಿಸಿದ್ದಾರೆ.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತುಂಬೆ ಡ್ಯಾಂ ನ ಸಮೀಪ ಬಲಪಾರ್ಶ್ವದಲ್ಲಿ ಸುಮಾರು 10 ಎಕರೆ ಯಷ್ಟು ಅಡಿಕೆ, ತೆಂಗಿನ ತೋಟ ಮತ್ತು ಭತ್ತ ಕೃಷಿ ಮಾಡುವ ಗದ್ದೆಗಳು ತುಂಬೆ ಡ್ಯಾಂ ನಿಂದ ಹೊರ ಬರುವ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ,ಮಹಾನಗರಪಾಲಿಕೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದೆಯಾದರೂ ಯಾವುದೇ ಪರಿಹಾರ ಅಥವಾ ಪರ್ಯಾಯ ಕಾರ್ಯವನ್ನು ಮಾಡಿಲ್ಲ ಎಂದು ಆರೋಪ ಮಾಡಿದ್ದಾರೆ. ಪರ್ಯಾಯ ವ್ಯವಸ್ಥೆ ಯಾಗಿ ತಡೆಗೋಡೆ ನಿರ್ಮಾಣ ಮಾಡಬೇಕು, ಬಳಿಕ ಭೂಮಿಯಲ್ಲಿದ್ದ ಕೃಷಿಯನ್ನು ಮತ್ತೆ ಮಾಡಿಕೊಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ. ಇವರ ಬೇಡಿಕೆಗೆ ಸ್ಪಂದಿಸುವ ಯಾವುದೇ ಭರವಸೆ ಇಲ್ಲದ ಕಾರಣ ಡಿ.26 ರಂದು ತುಂಬೆ ಡ್ಯಾಂಗೆ ಸಂಪೂರ್ಣ ಬೀಗ ಜಡಿದು ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದ್ದಾರೆ.ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದಾರೆ. ಈ ಬಾರಿ ಮತ್ತೆ ಇದೇ ರೀತಿಯ ಕ್ರಮ ಕೈಗೊಂಡರೆ ನಾವು ಸುಮ್ಮನಿರುವುದಿಲ್ಲ. ಭತ್ತ ಕೃಷಿ ಮಾಡಿದ ಕೃಷಿಯನ್ನು ಉದ್ದೇಶ ಪೂರ್ವಕವಾಗಿ ನೀರಿನಲ್ಲಿ ಮುಳುಗಿಸಿ, ರೈತರಿಗೆ ನಷ್ಟವುಂಟು ಮಾಡಿದ್ದಾರೆ ಎಂದು ಆರೋಪ ಮಾಡಿದರು. ರೈತರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುವ ಇಲಾಖೆಯ ವಿರುದ್ಧ ಬೃಹತ್ ಹೋರಾಟ ಮಾಡುತ್ತೇವೆ ಎಂದು ಇದಿನಬ್ಬ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಬ್ರಹ್ಮಣ್ಯ ಭಟ್, ಭಾಸ್ಕರ, ಆನಂದ ಶೆಟ್ಟಿ ಉಪಸ್ಥಿತರಿದ್ದರು.
