DAKSHINA KANNADA
ಹಿಜಾಬ್ ವಿವಾದ ಬೆಳೆಯಲು ರಾಜ್ಯ ಸರಕಾರದ ವೈಫಲ್ಯ ಕಾರಣ- ಕಾವು ಹೇಮನಾಥ ಶೆಟ್ಟಿ
ಪುತ್ತೂರು: ರಾಜ್ಯದಲ್ಲಿ ಹಿಜಾಬ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳಲು ರಾಜ್ಯ ಸರಕಾರದ ವೈಫಲ್ಯವೇ ಕಾರಣ ಎಂದು ಕೆ.ಪಿ.ಸಿ.ಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.
ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಹಿಜಾಬ್ ವಿವಾದ ಏರ್ಪಟ್ಟ ಕೂಡಲೇ ಸರಕಾರ ಮಧ್ಯಪ್ರವೇಶಿಸಿ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಬೇಕಿತ್ತು.ವಿವಾದ ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ತಲುಪಿ, ಕೋರ್ಟ್ ಮೆಟ್ಟಲೇರುವವರೆಗೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ಈ ಹಿಂದೆ ಇಲ್ಲದ ಹಿಜಾಬ್ ವಿವಾದ ಒಮ್ಮೆಲೇ ಏಳಲು ಕಾರಣವೇನು? ಈ ವಿವಾದದ ಹಿಂದೆ ಯಾರ ಕೈವಾಡವಿದೆ ಎನ್ನುವ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದ ಅವರು ಒಂದು ಕಡೆಯಲ್ಲಿ ಸರಕಾರದ ಮಂತ್ರಿಗಳೇ ನಿರ್ದಿಷ್ಟ ಸಮುದಾಯವನ್ನು ಬೆಂಬಲಿಸುವ ಮೂಲಕ ವಿವಾದ ಹೆಚ್ಚಾಗಲು ಸರಕಾರವೇ ನೇರ ಕಾರಣ ಎನ್ನುವುದನ್ನು ಮನವರಿಕೆ ಮಾಡಿಕೊಡುತ್ತಿದೆ.
ಮಂತ್ರಿಯಾಗಿರುವ ಕೆ.ಎಸ್.ಈಶ್ವರಪ್ಪ ಕೇಸರಿ ಶಾಲುಗಳನ್ನು ತಾವೇ ಪೂರೈಕೆ ಮಾಡಿದ್ದೇವೆ, ಏನಾಗಬೇಕು ಎನ್ನುವ ಉಡಾಫೆಯ ಹೇಳಿಕೆಯನ್ನು ನೀಡುತ್ತಿರುವುದು ಗೊಂದಲ ಇನ್ನಷ್ಟು ತಾರಕಕ್ಕೇರಲು ಕಾರಣವಾಗಿದೆ. ಈಗಾಗಲೇ ಹೈಕೋರ್ಟ್ ಹಿಜಾಬ್ ಬಗ್ಗೆ ತನ್ನ ಮಧ್ಯಂತರ ತೀರ್ಪನ್ನು ಪ್ರಕಟಿಸಿದ್ದು, ಈ ತೀರ್ಪಿಗೆ ಎಲ್ಲರೂ ಬದ್ಧವಾಗಬೇಕು ಎಂದರು. ಮುಂದಿನ ದಿನದಲ್ಲಿ ಹಿಜಾಬ್ ಕುರಿತಂತೆ ಹೈಕೋರ್ಟ್ ಈ ಸ್ಪಷ್ಟ ತೀರ್ಪು ನೀಡಲಿದ್ದು, ಕಾಂಗ್ರೇಸ್ ಯಾವುದೇ ತೀರ್ಪನ್ನು ಸ್ವಾಗತಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
You must be logged in to post a comment Login